ನವದೆಹಲಿ: ₹ 68 ಕೋಟಿಗಳ ಸಾಲ ಸುಸ್ತಿ ಪ್ರಕರಣದಲ್ಲಿ ವಂಚನೆ ಎಸಗಿದ ಆರೋಪಕ್ಕಾಗಿ ಸಿಬಿಐ, ರಾಷ್ಟ್ರೀಕೃತ ಕೆನರಾ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಆರ್. ಕೆ. ದುಬೆ ವಿರುದ್ಧ ಆರೋಪ ಪಟ್ಟಿ ದಾಖಲಿಸಿದೆ.
2013ರಲ್ಲಿ ನಡೆದ ಈ ವಂಚನೆ ಪ್ರಕರಣ ಸಂಬಂಧ, ಬ್ಯಾಂಕ್ನ ಅಂದಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಅಶೋಕ್ ಕುಮಾರ್ ಗುಪ್ತ ಮತ್ತು ವಿ. ಎಸ್. ಕೃಷ್ಣ ಕುಮಾರ್ ಅವರನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಇಲ್ಲಿನ ತೀಸ್ ಹಜಾರಿ ಕೋರ್ಟ್ನಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.
ಬ್ಯಾಂಕ್ನಿಂದ ಸಾಲ ಪಡೆದು ಮರುಪಾವತಿಸದ ಅಕ್ಯಾಸನಲ್ ಸಿಲ್ವರ್ ಕಂಪನಿ ಲಿಮಿಟೆಡ್ನ ಇಬ್ಬರು ನಿರ್ದೇಶಕರಾದ ಕಪಿಲ್ ಗುಪ್ತ ಮತ್ತು ರಾಜ್ ಕುಮಾರ್ ಗುಪ್ತ ಅವರನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.
ಸಾಲ ವಿತರಿಸಲು ದುಬೆ ಅವರು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಪ್ರಭಾವ ಬೀರಿದ ಎಸ್ಎಂಎಸ್ ಸಂದೇಶಗಳು ತನ್ನ ವಶದಲ್ಲಿ ಇವೆ ಎಂದು ಸಿಬಿಐ ಹೇಳಿದೆ.
ಮಂಜೂರು ಮಾಡಿದ ಮೂರು ತಿಂಗಳಲ್ಲಿ ಈ ಸಾಲ ವಿತರಿಸಲಾಗಿತ್ತು. ಕೆಲವೇ ತಿಂಗಳಲ್ಲಿ ಈ ಮೊತ್ತವು ವಸೂಲಾಗದ ಸಾಲವಾಗಿ ಮಾರ್ಪಟ್ಟಿತ್ತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.