
2026-27ನೇ ಸಾಲಿನ ಕೇಂದ್ರ ಬಜೆಟ್ ಭಾರತದ ರಕ್ಷಣಾ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡಿದ್ದು, 2026-27ರ ಅವಧಿಗೆ ದಾಖಲೆಯ 7,84,678 ಕೋಟಿ ರೂಪಾಯಿಗಳನ್ನು ನಿಯೋಜಿಸಿದೆ. ಇದು ಹಿಂದಿನ ವರ್ಷದ 6.81 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ 15% ಹೆಚ್ಚಳವಾಗಿದೆ. 2025ರಲ್ಲಿ ಭಾರತ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿತ್ತು. ಭಾರತದ ಮೇಲಿನ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಮೇ ತಿಂಗಳಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿನ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರತ ಪ್ರತಿ ದಾಳಿ ನಡೆಸಿತ್ತು. ಇದು ಭಾರತದ ನಿಖರ ದಾಳಿ ಸಾಮರ್ಥ್ಯ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ನಿರ್ಣಾಯಕ ಪ್ರತಿಕ್ರಿಯೆಗೆ ಸಾಕ್ಷಿಯಾಗಿತ್ತು. ಈ ಯಶಸ್ವಿ ಕಾರ್ಯಾಚರಣೆಯ ಬೆನ್ನಲ್ಲೇ ಮಂಡನೆಯಾಗಿರುವ ಈ ವರ್ಷದ ಬಜೆಟ್, ಭಾರತೀಯ ಸೇನಾ ಪಡೆಗಳನ್ನು ಆಧುನಿಕ, ಸ್ವಾವಲಂಬಿ, ಮತ್ತು ಚೀನಾ ಹಾಗೂ ಪಾಕಿಸ್ತಾನಗಳಂತಹ ನೆರೆಯ ದೇಶಗಳ ಸವಾಲುಗಳನ್ನು ಎದುರಿಸಲು ಸಜ್ಜಾಗುವಂತೆ ಮಾಡುವ ಗುರಿ ಹೊಂದಿದೆ.
ರಕ್ಷಣಾ ಬಜೆಟ್ ಏಕೆ ಮುಖ್ಯ?
ಗಡಿ ಉದ್ವಿಗ್ನತೆಗಳು ಮತ್ತು ಭದ್ರತಾ ಅಪಾಯಗಳ ಕಾರಣದಿಂದ, ಭಾರತದ ರಕ್ಷಣಾ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಆಪರೇಷನ್ ಸಿಂದೂರದ ಐತಿಹಾಸಿಕ ಯಶಸ್ಸಿನ ಬಳಿಕ, ಸರ್ಕಾರ ಭಾರತದ ಆಯುಧಗಳನ್ನು, ರಕ್ಷಣಾ ಉಪಕರಣಗಳನ್ನು, ಮತ್ತು ತಂತ್ರಜ್ಞಾನಗಳನ್ನು ವೇಗವಾಗಿ ಮೇಲ್ದರ್ಜೆಗೇರಿಸಲು ಬಯಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ನಡೆಯನ್ನು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದ್ದು, ಇಷ್ಟೊಂದು ಬೃಹತ್ ಮೊತ್ತವನ್ನು ನಿಯೋಜಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ. ಈ ಬಜೆಟ್ ಅತ್ಯಂತ ಶಕ್ತಿಶಾಲಿ ಸೇನೆಯನ್ನು ನಿರ್ಮಿಸಬೇಕು ಎನ್ನುವ ಭಾರತದ ಬದ್ಧತೆಯನ್ನು ಇನ್ನಷ್ಟು ಬಲಪಡಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಬಜೆಟ್ ಭದ್ರತೆ, ಅಭಿವೃದ್ಧಿ, ಮತ್ತು ಸ್ವಾವಲಂಬನೆಗಳ (ಆತ್ಮನಿರ್ಭರ ಭಾರತ) ನಡುವೆ ಸಮತೋಲನ ಸಾಧಿಸಲಿದ್ದು, ಅಭಿವೃದ್ಧಿ ಹೊಂದಿದ ಭಾರತದ (ವಿಕಸಿತ ಭಾರತ) ಕನಸಿಗೆ ಬೆಂಬಲ ನೀಡಲಿದೆ.
ಒಟ್ಟಾರೆ ರಕ್ಷಣಾ ಬಜೆಟ್ 2026-27ನೇ ಸಾಲಿನ ಭಾರತದ ನಿರೀಕ್ಷಿತ ಜಿಡಿಪಿಯ 2% ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇದು ಕೇಂದ್ರ ಸರ್ಕಾರದ ಒಟ್ಟು ವೆಚ್ಚದಲ್ಲಿ 14.67% ಪಾಲು ಹೊಂದಿದ್ದು, ರಕ್ಷಣಾ ಸಚಿವಾಲಯಕ್ಕೆ ಬೇರೆಲ್ಲ ಇಲಾಖೆಗಳಿಗಿಂತಲೂ ಹೆಚ್ಚಿನ ಮೊತ್ತ ಲಭಿಸುತ್ತದೆ.
ಈ ಹಣವನ್ನು ಹೇಗೆ ವೆಚ್ಚ ಮಾಡಲಾಗುತ್ತದೆ: ಒಂದು ಸರಳ ಲೆಕ್ಕಾಚಾರ
ರಕ್ಷಣಾ ಬಜೆಟ್ ಅನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಭಜಿಸಲಾಗುತ್ತದೆ:
ಬಂಡವಾಳ ಹೂಡಿಕೆ (ಹೊಸ ಖರೀದಿಗಳು, ಮೇಲ್ದರ್ಜೆಗೊಳಿಸುವಿಕೆ, ಮತ್ತು ಉಪಕರಣಗಳು, ಮೂಲಭೂತ ವ್ಯವಸ್ಥೆಗಳಂತಹ ದೀರ್ಘಾವಧಿಯ ಆಸ್ತಿಗಳಿಗೆ): 2,19,306 ಕೋಟಿ ರೂಪಾಯಿ.
ಇದು ಹಿಂದಿನ ಬಜೆಟ್ನ ಅಂದಾಜು ಮೊತ್ತವಾದ 1.80 ಲಕ್ಷ ಕೋಟಿಗಿಂತ ಹೆಚ್ಚಾಗಿದ್ದು, 1,86,454 ಕೋಟಿ ರೂಪಾಯಿಗಳ ಪರಿಷ್ಕೃತ ಅಂದಾಜಿಗಿಂತಲೂ ಹೆಚ್ಚಾಗಿದೆ.
ಇದು ಭೂ ಸೇನೆ, ನೌಕಾ ಸೇನೆ ಮತ್ತು ವಾಯು ಸೇನೆಗಳ ಆಧುನೀಕರಣಕ್ಕೆ ಆದ್ಯತೆ ನೀಡುತ್ತದೆ.
ಏರ್ಕ್ರಾಫ್ಟ್ ಮತ್ತು ಏರೋ ಇಂಜಿನ್ಗಳಿಗಾಗಿ 63,733 ಕೋಟಿ ರೂಪಾಯಿ
ನೌಕಾಪಡೆಯ ಅಭಿವೃದ್ಧಿಗೆ (ಯುದ್ಧ ನೌಕೆಗಳು ಮತ್ತು ಇತರ ಸಂಬಂಧಿತ ಉಪಕರಣಗಳು) 25,023 ಕೋಟಿ ರೂಪಾಯಿ
ಒಟ್ಟಾರೆ ಬಂಡವಾಳ ವೆಚ್ಚದಲ್ಲಿ, ಅಂದಾಜು 1.85 ಲಕ್ಷ ಕೋಟಿ ರೂಪಾಯಿಗಳನ್ನು ಹೊಸ ಆಯುಧಗಳು, ವಿಮಾನಗಳು, ಯುದ್ಧ ನೌಕೆಗಳು, ಸಬ್ಮರೀನ್ಗಳು, ಮತ್ತು ಇತರ ಅತ್ಯಾಧುನಿಕ ಉಪಕರಣಗಳ ಖರೀದಿಗೆ ಬಳಕೆಯಾಗಲಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 24% ಹೆಚ್ಚಳವಾಗಿದೆ.
ಮುಖ್ಯವಾಗಿ, 1.39 ಲಕ್ಷ ಕೋಟಿ ರೂಪಾಯಿ (ಬಂಡವಾಳ ಖರೀದಿಯ 75%) ಖಾಸಗಿ ಸಂಸ್ಥೆಗಳು ಸೇರಿದಂತೆ, ಭಾರತೀಯ ಉದ್ಯಮಗಳಿಗೇ ಲಭಿಸಲಿದೆ. ಇದು ಸ್ಥಳೀಯ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡಿ, ಹೆಚ್ಚಿನ ಉದ್ಯೋಗ ಸೃಷ್ಟಿಸಿ, ಬಲವಾದ ಪೂರೈಕೆ ಸರಪಳಿಯನ್ನು ನಿರ್ಮಿಸಿ, ದೀರ್ಘಾವಧಿಯ ಹೂಡಿಕೆಯನ್ನು ಸೆಳೆಯಲಿದೆ.
ರಾಜಸ್ವ ವೆಚ್ಚ (ದೈನಂದಿನ ಕಾರ್ಯಾಚರಣೆಗಳು, ಸಂಬಳಗಳು ಮತ್ತು ನಿರ್ವಹಣೆ): 5,53,668 ಕೋಟಿ ರೂಪಾಯಿ
ಈ ಮೊತ್ತ ಸಂಬಳಗಳು, ಭತ್ಯೆಗಳು, ಇಂಧನ, ತರಬೇತಿ, ಮತ್ತು ಸೇನಾ ಪಡೆಗಳನ್ನು ಕಾರ್ಯಾಚರಣಾ ಸನ್ನದ್ಧವಾಗಿಡಲು ಬಳಕೆಯಾಗುತ್ತದೆ.
ಪಿಂಚಣಿಗಳು: 1,71,338 ಕೋಟಿ (ಒಟ್ಟು ರಕ್ಷಣಾ ಬಜೆಟ್ನ 21.84%) ಮೊತ್ತ ಮಾಜಿ ಯೋಧರು ಮತ್ತು ಅವರ ಕುಟುಂಬಗಳಿಗೆ ದೊರೆಯುತ್ತದೆ.
27.95% ಬಂಡವಾಳಕ್ಕೆ (ಹೊಸ ಉಪಕರಣಗಳು ಮತ್ತು ಮೂಲಭೂತ ಸೌಕರ್ಯಗಳಿಗೆ)
20.17% ದೈನಂದಿನ ಅಗತ್ಯಗಳು ಮತ್ತು ಕಾರ್ಯಾಚರಣಾ ಸಿದ್ಧತೆಗೆ
26.40% ಸಂಬಳಗಳು ಮತ್ತು ಭತ್ಯೆಗಳಿಗೆ
21.84% ಪಿಂಚಣಿಗಳಿಗೆ
3.64% ನಾಗರಿಕ ಸಂಸ್ಥೆಗಳಿಗೆ
ಪ್ರಮುಖ ಕ್ಷೇತ್ರಗಳಿಗೆ ಹೆಚ್ಚುವರಿ ಬೆಂಬಲ
ಡಿಆರ್ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ): ಸಂಸ್ಥೆಗೆ ಈ ಬಾರಿ 29,100.25 ಕೋಟಿ ರೂಪಾಯಿ ನೀಡಲಾಗಿದ್ದು, ಕಳೆದ ವರ್ಷದ 26,816.82 ಕೋಟಿ ರೂಪಾಯಿಗಳಿಂದ ಹೆಚ್ಚಳವಾಗಿದೆ. ಇದರ ಪೈಕಿ, 17,250.25 ಕೋಟಿ ರೂಪಾಯಿಯನ್ನು ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಇನ್ನಷ್ಟು ನವೀನವಾಗಿಸಲು ಬೇಕಾದ ನೂತನ ತಂತ್ರಜ್ಞಾನ, ಸಂಶೋಧನೆ, ಮತ್ತು ಅಭಿವೃದ್ಧಿಗೆ ಬಳಸಲಾಗುತ್ತದೆ.
ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ: 12,100 ಕೋಟಿ ರೂಪಾಯಿಗಳನ್ನು ಎಕ್ಸ್ ಸರ್ವಿಸ್ಮೆನ್ ಕಾಂಟ್ರಿಬ್ಯೂಟರಿ ಹೆಲ್ತ್ ಸ್ಕೀಮ್ಗೆ ಒದಗಿಸಲಾಗಿದ್ದು, ಇದು 45% ಹೆಚ್ಚಳ ಕಂಡಿದೆ. ಈ ಮೂಲಕ ನಿವೃತ್ತ ಯೋಧರು ಮತ್ತು ಅವರ ಕುಟುಂಬಗಳ ಕುರಿತು ಕಾಳಜಿ ಪ್ರದರ್ಶಿಸಲಾಗಿದೆ.
ಗಡಿ ಮೂಲಭೂತ ವ್ಯವಸ್ಥೆ: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಓ) 7,394 ಕೋಟಿ ರೂಪಾಯಿಗಳನ್ನು ಪಡೆದಿದ್ದು, ಇದನ್ನು ಗಡಿ ಪ್ರದೇಶಗಳಲ್ಲಿ ಸುರಂಗ ಮಾರ್ಗಗಳು, ಸೇತುವೆಗಳು, ಮಾರ್ಗಗಳು, ಮತ್ತು ಏರ್ ಫೀಲ್ಡ್ಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದು ಸಂಪರ್ಕವನ್ನು ಸುಧಾರಿಸಿ, ಸ್ಥಳೀಯ ಪ್ರಗತಿಗೆ ನೆರವಾಗಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. (ಬಿಆರ್ಒ ಮೂಲಕ ನಡೆಸುವ ಗಡಿ ಸಂಬಂಧಿತ ಕಾರ್ಯಗಳು ದೀರ್ಘಾವಧಿಯ ಆಸ್ತಿಗಳನ್ನು ನಿರ್ಮಿಸುವುದರಿಂದ, ಇದನ್ನು ದೈನಂದಿನ ಖರ್ಚುಗಳ ಬದಲಿಗೆ ಬಂಡವಾಳ ಹೂಡಿಕೆ ಎಂದು ಪರಿಗಣಿಸಲಾಗಿದೆ).
ಏರೋಸ್ಪೇಸ್ ಉದ್ಯಮಕ್ಕೆ ಉತ್ತೇಜನ: ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ನಾಗರಿಕ, ತರಬೇತಿ ಮತ್ತು ಇತರ ವಿಮಾನಗಳ ಬಿಡಿಭಾಗಗಳ ಮೇಲಿನ ಸುಂಕವನ್ನು ತೆಗೆದು ಹಾಕಿದ್ದಾರೆ. ರಕ್ಷಣಾ ವಿಭಾಗದ ವಿಮಾನ ನಿರ್ವಹಣೆ, ದುರಸ್ತಿ, ಮತ್ತು ಸಮಗ್ರ ಪರಿಶೀಲನೆಗಳನ್ನೂ ಸುಂಕದಿಂದ ಹೊರಗಿಡಲಾಗಿದೆ. ಈ ಹೆಜ್ಜೆಗಳು ರಕ್ಷಣಾ ಏರೋಸ್ಪೇಸ್ ವಲಯ ಬಲವಾಗಿ ಬೆಳೆಯುವಂತೆ ಮಾಡುತ್ತವೆ.
ಶಕ್ತಿ ಮತ್ತು ಸಮತೋಲನದ ದೃಷ್ಟಿ
ಧನಾತ್ಮಕ ಅಂಶಗಳು:
ಬಂಡವಾಳ ವೆಚ್ಚದಲ್ಲಿ ಭಾರೀ ಹೆಚ್ಚಳ ಆಧುನೀಕರಣ ಮತ್ತು ಹೊಸ, ಆಧುನಿಕ ಉಪಕರಣಗಳ ಖರೀದಿಯತ್ತ ಗಮನ ಹರಿಸುತ್ತದೆ.
ದೇಶೀಯ ನಿರ್ಮಾಣದ ರಕ್ಷಣಾ ಉಪಕರಣಗಳು 'ಮೇಕ್ ಇನ್ ಇಂಡಿಯಾ' ಪರಿಕ್ರಮಕ್ಕೆ ಬೆಂಬಲ ನೀಡಲಿದ್ದು, ವಿದೇಶೀ ಖರೀದಿಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ.
ಡಿಆರ್ಡಿಒ ಮತ್ತು ಗಡಿ ರಸ್ತೆಗಳಿಗೆ ಹೆಚ್ಚಿನ ನಿಧಿ ದೀರ್ಘಾವಧಿಯಲ್ಲಿ ಶಕ್ತಿ ನೀಡಿ, ತಂತ್ರಜ್ಞಾನವನ್ನು ಬಲಪಡಿಸುತ್ತವೆ.
ನಿವೃತ್ತ ಯೋಧರ ಕಾಳಜಿಗೆ ಮತ್ತು ಪಿಂಚಣಿಗಳಿಗೆ ಹೆಚ್ಚಿನ ಹಣ ಒದಗಿಸಿರುವುದು ಅವರ ನೈತಿಕತೆ ಹೆಚ್ಚಳಕ್ಕೆ ಪೂರಕ ಹೆಜ್ಜೆಯಾಗಿದೆ.
ಒಟ್ಟಾರೆಯಾಗಿ, ಆಪರೇಷನ್ ಸಿಂದೂರದ ಬಳಿಕ ಈ ಬಜೆಟ್ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿ, ಭಾರತವನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧವಾಗಿಸುತ್ತದೆ.
ಗಮನಿಸಬೇಕಾದ ವಲಯಗಳು:
ಜಿಡಿಪಿಯ 2% ಮೊತ್ತವನ್ನು ರಕ್ಷಣಾ ಕ್ಷೇತ್ರಕ್ಕೆ ವೆಚ್ಚ ಮಾಡುತ್ತಿರುವುದು ಹಿಂದಿಗಿಂತ ಹೆಚ್ಚಿನದಾಗಿದ್ದರೂ, ಬಹಳಷ್ಟು ತಜ್ಞರು ಹೆಚ್ಚಿನ ಅಪಾಯಗಳನ್ನು ಎದುರಿಸಲು 2.5ರಿಂದ 3% ವೆಚ್ಚ ಮಾಡಬೇಕು ಎಂದು ಸಲಹೆ ನೀಡಿರುವುದಕ್ಕೆ ಹೋಲಿಸಿದರೆ, ಇದು ಬಹಳ ಕಡಿಮೆಯಾಗಿದೆ.
ಬಜೆಟ್ನಲ್ಲಿ ದೊಡ್ಡ ಪಾಲು ಸಂಬಳಗಳಿಗೆ, ಪಿಂಚಣಿಗೆ, ಮತ್ತು ದೈನಂದಿನ ವೆಚ್ಚಕ್ಕೆ (70%ಕ್ಕೂ ಹೆಚ್ಚು) ಬಳಕೆಯಾಗುತ್ತದೆ. ಇದರ ಪರಿಣಾಮವಾಗಿ, ಮುಂದುವರಿದ ದೇಶಗಳಿಗೆ ಹೋಲಿಸಿದರೆ ಹೊಸ ಆಯುಧಗಳನ್ನು ಖರೀದಿಸಲು ಕಡಿಮೆ ಮೊತ್ತವನ್ನು ಉಳಿಸುತ್ತದೆ.
ಯಶಸ್ಸು ವೇಗವಾದ ಮತ್ತು ಬುದ್ಧಿವಂತಿಕೆಯ ವೆಚ್ಚ ಮಾಡುವಿಕೆಯ ಮೇಲೆ ಅವಲಂಬಿತವಾಗಿದ್ದು, ಅಭಿವೃದ್ಧಿ ಯೋಜನೆಗಲ್ಲಿನ ವಿಳಂಬವನ್ನು ತಪ್ಪಿಸುತ್ತದೆ. ಇದರಿಂದಾಗಿ ಖಾಸಗಿ ಕಂಪನಿಗಳು ಸಮಯಕ್ಕೆ ಸರಿಯಾಗಿ ಪೂರೈಕೆ ನಡೆಸುತ್ತವೆ.
ಸರಳವಾಗಿ ಹೇಳುವುದಾದರೆ, ಈ ಬಾರಿಯ ರಕ್ಷಣಾ ಬಜೆಟ್ ಭವಿಷ್ಯದತ್ತ ದೃಷ್ಟಿ ನೆಟ್ಟ ಬಜೆಟ್ ಆಗಿದೆ. ಇದು ಸೇನಾಪಡೆಗಳಿಗೆ ದೇಶವನ್ನು ರಕ್ಷಿಸಲು ಹೆಚ್ಚಿನ ಶಕ್ತಿಯನ್ನು ನೀಡುತ್ತಾ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಒತ್ತು ನೀಡುತ್ತಿದೆ. ರಾಜನಾಥ್ ಸಿಂಗ್ ಅವರು ಹೇಳಿರುವಂತೆ ಈ ಬಾರಿಯದು 'ಯುವಶಕ್ತಿ ಚಾಲಿತ ಬಜೆಟ್' ಆಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸುಭದ್ರ, ಸ್ವಾವಲಂಬಿ, ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ಪೂರಕವಾಗಿದೆ.
ಪ್ರಮುಖ ಅಂಶಗಳು:
ಬಂಡವಾಳ ಹೂಡಿಕೆ: 1.85 ಲಕ್ಷ ಕೋಟಿ (24% ಹೆಚ್ಚಳ)
ಭಾರತೀಯ ಸಂಸ್ಥೆಗಳಿಂದ ಖರೀದಿ: ಒಟ್ಟು ಖರೀದಿಯ 75%
ಡಿಆರ್ಡಿಒ: 29,100 ಕೋಟಿ ರೂಪಾಯಿ
ನಿವೃತ್ತ ಯೋಧರ ಆರೋಗ್ಯ: 12,100 ಕೋಟಿ ರೂಪಾಯಿ (45% ಹೆಚ್ಚಳ)
ಬಿಆರ್ಒ (ಬಂಡವಾಳ ಹೂಡಿಕೆಯಡಿ ಗಡಿ ಸೌಲಭ್ಯಗಳು): 7,394 ಕೋಟಿ ರೂಪಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.