ಬೆಂಗಳೂರು: 'ಕೃಷಿ ಇಲ್ಲದೆ ಯಾವುದೂ ಉಳಿಯದು, ಯಾವುದೂ ಬೆಳೆಯದು, ಕೃಷಿಗೆ ಪೂರಕ ಬಜೆಟ್' ಮಂಡಿಸುತ್ತಿರುವುದಾಗಿ ಭಾಷಣದಲ್ಲಿ ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ ಆರ್ಥಿಕತೆ ಚೇತರಿಕೆ ನೀಡಲು ಕೆಲವು ಕ್ರಮಗಳನ್ನು ಘೋಷಿಸಿದರು.
ಕೌಶಲ ಅಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆಗೆ ಗಮನ ಹರಿಸುವುದು ಪ್ರಮುಖ ಕ್ರಮವಾಗಿದೆ. ಕಳೆದ ವರ್ಷ ಶೇ 7.8ರಷ್ಟಿದ್ದ ರಾಜ್ಯದ ಒಟ್ಟಾರೆ ಜಿಡಿಪಿ, 2019–20ನೇ ಸಾಲಿನಲ್ಲಿ ಶೇ 6.8 ಮುಟ್ಟಬಹುದು ಎಂದು ನಿರೀಕ್ಷಿಸಲಾಗಿದೆ.
ತೆರಿಗೆ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಉತ್ಪನ್ನಗಳ ಮೂಲಕ ಕರ್ನಾಟಕ ರಾಜ್ಯವು ದೇಶಕ್ಕೆ ಆದಾಯ ತಂದುಕೊಡುತ್ತಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಕಡಿಮೆ ಇದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಜಿಎಸ್ಟಿ ಪಾಲು ಸುಮಾರು ₹11,000 ಕೋಟಿ ಸಿಕ್ಕಿಲ್ಲ. ಅನುದಾನದಲ್ಲಿಯೂ ಸುಮಾರು ₹8,000 ಕೋಟಿ ಕಡಿಮೆಯಾಗಿದೆ ಎಂದು ಹೇಳಿದರು.
2019–20ರಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಕಡಿಮೆಯಾಗಿದ್ದು, ₹1,993 ಕೋಟಿ ಕಡಿತವಾಗಿದೆ. ರಾಜಸ್ವ ಸಂಪನ್ಮೂಲ ಇಳಿಕೆಯಾಗಿದೆ. ಜಿಎಸ್ಟಿ ಉಪಕರದ ನಿರೀಕ್ಷಿತ ಸಂಗ್ರಹ ಖೋತಾ ಕಾರಣ, ಸುಮಾರು ₹3,000 ಕೋಟಿ ರಾಜ್ಯದ ಪಾಲು ಕಡಿಮೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಕೆಲ ಇಲಾಖೆಗಳ ವೆಚ್ಚ ಕಡಿಮೆ ಮಾಡಿದ್ದೇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.