ಸಾಂದರ್ಭಿಕ ಚಿತ್ರ
ಬೆಂಗಳೂರು: ಎರಡೂವರೆ ಲಕ್ಷ ಮಹಿಳಾ ಸ್ವಸಹಾಯ ಸಂಘಗಳಿಗೆ ನೆರವು ನೀಡಿರುವುದು, ಕೃಷಿ ಆಧಾರಿತ ಉಪ ಕಸುಬುಗಳಲ್ಲಿ ತೊಡಗಿಸಿರುವ ರೈತ ಮಹಿಳೆಯರಿಗೆ, ಮಾಜಿ ದೇವದಾಸಿಯರಿಗೆ, ಅಂಗನವಾಡಿ ಸಿಬ್ಬಂದಿಗೆ ನೆರವು ಮಹಿಳಾ ಸಬಲೀಕರಣದ ಪ್ರಮುಖ ಹೆಜ್ಜೆ.
ಅತಿಸಣ್ಣ ಉದ್ಯಮ ಆರಂಭಿಸಲು 50 ಸಾವಿರ ಸ್ವಸಹಾಯ ಸಂಘಗಳಿಗೆ ನೆರವು ಹಾಗೂ ಮೀನುಗಾರಿಕೆ, ಕುಕ್ಕುಟೋದ್ಯಮ, ಕುರಿ ಮತ್ತು ಮೇಕೆ, ಜೇನು ಸಾಕಣೆಯಂತಹ ಕಿರು ಉದ್ದಿಮೆಗಳ ಸ್ಥಾಪನೆ, ಅವುಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ₹100 ಕೋಟಿ ನಿಗದಿ ಮಾಡಲಾಗಿದೆ. ನೆರವು ಪಡೆಯಲು ಒಂದು ಲಕ್ಷ ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ಅವಕಾಶ ನೀಡಲಾಗಿದೆ.
ಸ್ಥಳೀಯ ಆಹಾರವನ್ನು ಕೈಗೆಟಕುವ ದರದಲ್ಲಿ ಒದಗಿಸಲು ಮಹಿಳೆಯರೇ ನಡೆಸುವ ‘ಕೆಫೆ ಸಂಜೀವಿನಿ‘ ಆರಂಭಿಸುತ್ತಿದ್ದು, 50 ಕೆಫೆಗಳಿಗೆ ₹7.50 ಕೋಟಿ ಮೀಸಲಿಡಲಾಗಿದೆ. ಕಾಫಿ ಮಂಡಳಿ ಸಹಭಾಗಿತ್ವದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಾಗಿರುವ ಒಂದು ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮದ ತರಬೇತಿ ನೀಡಲಾಗುತ್ತಿದೆ. 2,500 ಕಾಫಿ ಕಿಯೋಸ್ಕ್ಗಳನ್ನು ₹25 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದೆ.
ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಚಟುವಟಿಕೆ ನಡೆಸಲು ₹10 ಕೋಟಿ ನೀಡಲಾಗಿದೆ.
ಮಾಸಾಶನ ಹೆಚ್ಚಳ: ಮಾಜಿ ದೇವದಾಸಿಯರ ಮಾಸಾಶನವನ್ನು ₹1500ದಿಂದ ₹2 ಸಾವಿರಕ್ಕೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಾಶನ
ವನ್ನು ₹ 800 ರಿಂದ ₹1,200ಗೆ ಹೆಚ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ಘೋಷಿಸಿದೆ.
ಹಸು, ಎಮ್ಮೆ ಖರೀದಿಗೆ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿದ ರೈತ ಮಹಿಳೆಯರಿಗೆ ಶೇ 6ರ ಬಡ್ಡಿ ಸಹಾಯಧನ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.