ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿಯ ಒಂದು ಲಕ್ಷ ಮನೆ ಯೋಜನೆಯ 12,153 ಫಲಾನುಭವಿಗಳ ವಂತಿಕೆಯ ಪಾಲಿನಲ್ಲಿ ₹1 ಲಕ್ಷವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಜೆಟ್ನಲ್ಲಿ ₹121 ಕೋಟಿ ಘೋಷಿಸಿದ್ದಾರೆ.
ಕರ್ನಾಟಕ ಗೃಹ ಮಂಡಳಿಯಿಂದ ಆನೇಕಲ್ ತಾಲ್ಲೂಕಿನ ಸೂರ್ಯ ನಗರದ 4ನೇ ಹಂತದ ಯೋಜನೆಯಡಿ 16,410 ನಿವೇಶನಗಳನ್ನು 2025–26ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಲಾಗುವುದು. 50:50 ಅನುಪಾತದ ಪಾಲುದಾರಿಕೆಯಡಿ ಭೂ ಮಾಲೀಕರ ಪಾಲಿನ ನಿವೇಶನಗಳನ್ನು ನೀಡಿ, ಉಳಿದ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆಯಡಿಯ ಆಶ್ರಯ ಮನೆಗಳ (ಎಎಚ್ಪಿ) ಫಲಾನುಭವಿಗಳಿಗೆ ಸಾಲದ ಮೇಲಿನ ಬಡ್ಡಿ ಹೊರೆ ಕಡಿಮೆ ಮಾಡಲು ಬಡ್ಡಿ ಸಹಾಯಧನ ಯೋಜನೆ ಜಾರಿಗೊಳಿಸಲಾಗುತ್ತದೆ.
ಅಲ್ಲದೇ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ವಂತಿಕೆಯನ್ನು ಒಂದು ಲಕ್ಷ ರೂಪಾಯಿಗೆ ಇಳಿಕೆ ಮಾಡಿದೆ. ₹5 ಲಕ್ಷವನ್ನು ಫಲಾನುಭವಿ ಪರವಾಗಿ ಸರ್ಕಾರವೇ ಭರಿಸುತ್ತಿದೆ. ಈಗಾಗಲೇ 86,651ಮನೆಗಳು ಪೂರ್ಣಗೊಂಡಿದೆ.
ಸರ್ಕಾರದ ಭೂಮಿಯನ್ನು ಬಳಸಿ ಖಾಸಗಿ ಸಹಭಾಗಿತ್ವದೊಂದಿಗೆ ವಸತಿ ಘಟಕಗಳನ್ನು ನಿರ್ಮಿಸಿ, ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಹಂಚಿಕೆ ಮಾಡಲು ಯೋಜನೆ ರೂಪಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.