ADVERTISEMENT

ಬಜೆಟ್‌| 2 ರಾಜ್ಯಕ್ಕೆ ಮಾತ್ರ ಆದ್ಯತೆ ಆರೋಪ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ

ಪಿಟಿಐ
Published 24 ಜುಲೈ 2024, 9:45 IST
Last Updated 24 ಜುಲೈ 2024, 9:45 IST
<div class="paragraphs"><p>ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ</p></div>

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ

   

ಪಿಟಿಐ ಚಿತ್ರ

ನವದೆಹಲಿ: ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಇಂಡಿಯಾ ಬಣದ ನಾಯಕರು ಪ್ರತಿಭಟನಾರ್ಥವಾಗಿ ಸಭಾ ತ್ಯಾಗ ನಡೆಸಿದರು.

ADVERTISEMENT

ಎರಡು ರಾಜ್ಯಗಳನ್ನು ಮಾತ್ರ ಬಜೆಟ್ ಪ್ರತಿಯಲ್ಲಿ ಉಲ್ಲೇಖಿಸಿ ಅನುದಾನ ಒದಗಿಸಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಬಜೆಟ್‌ನಲ್ಲಿ ಎಲ್ಲ ರಾಜ್ಯಗಳನ್ನು ಉಲ್ಲೇಖ ಮಾಡಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.

ನಿಯಮ 267ರ ಅಡಿ ಸದನದ ಎಲ್ಲ ನಿಗದಿತ ಚರ್ಚೆಗಳನ್ನು ರದ್ದು ಮಾಡಿ ಬಜೆಟ್ ಬಗ್ಗೆ ಚರ್ಚಿಸಬೇಕೆಂಬ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ತಿರಸ್ಕರಿಸಿದರು.

ಇದಕ್ಕೊಪ್ಪದ ವಿಪಕ್ಷ ನಾಯಕ ಖರ್ಗೆ, ಕೇಂದ್ರ ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರ ಪ್ರದೇಶ ಎರಡು ರಾಜ್ಯಗಳಿಗೆ ಮಾತ್ರ ಅನುದಾನ ನೀಡಲಾಗಿದೆ. ಉಳಿದ ರಾಜ್ಯಗಳ ಉಲ್ಲೇಖ ಕಾಣಲೇ ಇಲ್ಲ. ಅದು ‘ಕುರ್ಚಿ ಬಚಾವೊ’ಡಾಕ್ಯುಮೆಂಟ್ ಆಗಿತ್ತು ಎಂದು ಕುಟುಕಿದರು. ಇದು ಸ್ಪಷ್ಟವಾಗಿ ರಾಜ್ಯಗಳಿಗೆ ಎಸಗಿದ ತಾರತಮ್ಯ ಎಂದು ಇಂಡಿಯಾ ಬಣದ ನಾಯಕರು ಸಭಾತ್ಯಾಗ ನಡೆಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಹಿಂದೆ ಚುನಾವಣೆಗೂ ಮುನ್ನ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲೂ ಎಲ್ಲ ರಾಜ್ಯಗಳ ಉಲ್ಲೇಖ ಇರಲಿಲ್ಲ. ಹಾಗೆಂದು ರಾಜ್ಯಗಳಿಗೆ ಕೇಂದ್ರದ ಯೋಜನೆಗಳು ತಲುಪುವುದಿಲ್ಲ ಎಂದರ್ಥವಲ್ಲ ಎಂದು ಸ್ಪಷ್ಟನೆ ನೀಡಿದರೂ ವಿಪಕ್ಷಗಳು ಕಿವಿಗೊಡಲಿಲ್ಲ. ಉದಾಹರಣೆಗೆ ಮಹಾರಾಷ್ಟ್ರ ರಾಜ್ಯವನ್ನು ಎರಡೂ ಬಜೆಟ್‌ಗಳಲ್ಲಿ ಉಲ್ಲೇಖಿಸಿಲ್ಲ. ಆದರೂ ಕೆಂದ್ರ ಸಂಪುಟವು ಮಹಾರಾಷ್ಟ್ರದ ದಹನು ಬಳಿ ವಾಧವನ್ ಬಂದರು ಕಾಮಗಾರಿಗೆ ₹76,000 ಕೋಟಿ ಅನುದಾನ ನೀಡಿದೆ ಎಂದು ಹೇಳಿದರು.ಆಂಧ್ರ ಪ್ರದೇಶ, ಬಿಹಾರವಲ್ಲದೆ ಬೇರೆ ರಾಜ್ಯಗಳು ಪ್ರಮುಖ ಯೋಜನೆಗಳನ್ನು ಪಡೆದಿವೆ ಎಂದು ಹೇಳಿದರು.

ನಮ್ಮ ರಾಜ್ಯಗಳಿಗೆ ಏನನ್ನೂ ಕೊಡಲಿಲ್ಲ. ಎರಡು ರಾಜ್ಯಗಳಿಗೆ ಮಾತ್ರ ಕೇಂದ್ರ ಬಜೆಟ್‌ನಲ್ಲಿ ಅನುದಾನ ಹಂಚಿಕೆಯಾಗಿದೆ ಎಂದು ಜನರಲ್ಲಿ ತಪ್ಪು ಭಾವನೆ ಮುಡಿಸುವ ಉದ್ದೇಶಪೂರ್ವಕ ಯತ್ನ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳದ್ದಾಗಿದೆ ಎಂದು ನಿರ್ಮಲಾ ಕಿಡಿಕಾರಿದರು.

ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುತ್ತೇನೆ. ಅವರು ಮಂಡಿಸಿರುವ ಎಲ್ಲ ಬಜೆಟ್‌ಗಳಲ್ಲು ದೇಶದ ಎಲ್ಲ ರಾಜ್ಯಗಳ ಹೆಸರನ್ನು ಉಲ್ಲೇಖಿಸಿದ್ದಾರೆಯೇ? ತೋರಿಸಲಿ. ಅವರ ಆರೋಪಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು.

ಆಂಧ್ರ ಪ್ರದೇಶದ ಟಿಡಿಪಿ ಮತ್ತು ಬಿಹಾರದ ಜೆಡಿಯು ಕೇಂದ್ರದ ಎನ್‌ಡಿಯ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಈ ಎರಡೂ ರಾಜ್ಯಗಳು ವಿಶೇಷ ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟಿದ್ದವು. ಅದರ ಬದಲಿಗೆ ಬಜೆಟ್‌ನಲ್ಲಿ ಭರಪೂರ ಅನುದಾನ ನೀಡಲಾಗಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಸುಮಾರು ₹60,000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್‌ ಅವರು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ಪ್ರಸ್ತಕ ಸಾಲಿನಲ್ಲಿ ವಿವಿಧ ಮೂಲಗಳಿಂದ ₹15,000 ಕೋಟಿ ಒದಗಿಸುವುದಾಗಿ ಹೇಳಿದ್ದಾರೆ. ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸಲು ಹಣಕಾಸಿನ ನೆರವು ಮತ್ತು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಅನುದಾನದ ಭರವಸೆಯನ್ನೂ ಿೀನಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.