ADVERTISEMENT

ಸಣ್ಣ ಹೂಡಿಕೆದಾರರನ್ನು ರಕ್ಷಿಸಲು ಎಸ್‌ಟಿಟಿ ಏರಿಕೆ: ನಿರ್ಮಲಾ ಸೀತಾರಾಮನ್‌

ಪಿಟಿಐ
Published 1 ಫೆಬ್ರುವರಿ 2026, 15:41 IST
Last Updated 1 ಫೆಬ್ರುವರಿ 2026, 15:41 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

ನವದೆಹಲಿ: ಹಣಕಾಸು ಮತ್ತು ವಾಣಿಜ್ಯ ವವಹಾರಗಳಲ್ಲಿ ಅಪಾಯ ಉಂಟುಮಾಡುವ ಊಹಾತ್ಮಕ ವ್ಯಾಪಾರವನ್ನು ತಡೆಯುವ ಮಹತ್ವದ ಉದ್ದೇಶವನ್ನು ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಹೆಚ್ಚಳ ಹೊಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ಹೇಳಿದರು.

ಜತೆಗೆ, ಭಾರಿ ಪ್ರಮಾಣದಲ್ಲಿ ಹಣ ಕಳೆದುಕೊಂಡು ಮೋಸ ಹೋಗುವ ಹೂಡಿಕೆದಾರರನ್ನು ಮಾರುಕಟ್ಟೆಯಿಂದ ದೂರ ಇಡುವುದು ಇದರ ಮತ್ತೊಂದು ಉದ್ದೇಶವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  

ADVERTISEMENT

‘ಫ್ಯೂಚರ್‌ ಟ್ರೇಡಿಂಗ್‌’ನ ಎಸ್‌ಟಿಟಿ ಅನ್ನು ಶೇ 0.02ರಿಂದ ಶೇ 0.05ರಷ್ಟಕ್ಕೆ ಮತ್ತು ‘ಆಪ್ಷನ್‌ ಟ್ರೇಡಿಂಗ್‌’ ಎಸ್‌ಟಿಟಿಯನ್ನು ಶೇ 0.15ಕ್ಕೆ ಈ ಬಜೆಟ್‌ನಲ್ಲಿ ಏರಿಸಲಾಗಿದೆ. 

ಸರ್ಕಾರ ವ್ಯಾಪಾರದ ವಿರುದ್ಧ ಇಲ್ಲ. ಆದರೆ ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾಗುವಂತಹ ಸಣ್ಣ ಹೂಡಿಕೆದಾರರನ್ನು ‘ಫ್ಯೂಚರ್ಸ್ ಆ್ಯಂಡ್‌ ಆಪ್ಷನ್ಸ್‌’ ಮಾರುಕಟ್ಟೆಯಿಂದ ದೂರ ಉಳಿಯುವಂತೆ ಮಾಡಲು ಬಯಸುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  

‘2026–27ನೇ ಸಾಲಿನ ಬಜೆಟ್‌ನಲ್ಲಿ ಅತ್ಯಧಿಕ ಅಂದರೆ ₹12.22 ಲಕ್ಷ ಕೋಟಿ ಬಂಡವಾಳ ವೆಚ್ಚವನ್ನು ಘೊಷಿಸಿದ್ದೇವೆ. ಇದು ಜಿಡಿಪಿಯ ಶೇ 4.4.ರಷ್ಟಾಗಿದೆ. ಕಳೆದ ಸಾಲಿನಲ್ಲಿ ಬಂಡವಾಳ ವೆಚ್ಚ ₹11.11 ಲಕ್ಷ ಕೋಟಿಯಷ್ಟಿತ್ತು. ಅಂದರೆ ಈ ಬಾರಿ ಶೇ 10ರಷ್ಟು ಹೆಚ್ಚಳವಾಗಿದೆ’ ಎಂದರು.  

2021–22ನೇ ಸಾಲಿನಲ್ಲಿ ಬಂಡಾವಳ ವೆಚ್ಚವು ಜಿಡಿಪಿಯ ಶೇ 2.5ರಷ್ಟಿತ್ತು, 2024–25ರಲ್ಲಿ ಅದು ಜಿಡಿಪಿಯ ಶೇ 4ರಷ್ಟಿತ್ತು. 2015–16ನೇ ಸಾಲಿನಲ್ಲಿ ಬಂಡಾವಳ ವೆಚ್ಚವು ₹2.35 ಲಕ್ಷ ಕೋಟಿಗಳಿಷ್ಟಿತ್ತು ಎಂದು ಅವರು ಅಂಕಿಅಂಶ ಸಹಿತ ವಿವರಿಸಿದರು. 

ಈ ಬಾರಿಯ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ಶೇ 4.3ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ. ಇದು ವಾಸ್ತವವೂ ಜವಾಬ್ದಾರಿಯುತವೂ ಹೌದು. ಕಳೆದ ಸಾಲಿನಲ್ಲಿ ಇದು ಶೇ 4.4ರಷ್ಟಿತ್ತು ಎಂದು ಅವರು ವಿವರಿಸಿದರು.

ಚುನಾವಣೆ ಎದುರಿಸಲಿರುವ ರಾಜ್ಯಗಳಿಗೆ ಬಜೆಟ್‌ನಲ್ಲಿ ಯಾವುದೇ ದೊಡ್ಡ ಘೋಷಣೆಗಳನ್ನು ಮಾಡದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಕೈಗಾರಿಕಾ ಕಾರಿಡಾರ್‌ಗಳು ಸೇರಿದಂತೆ ವಿವಿಧ ಯೋಜನೆಗಳ ಘೋಷಣೆಗಳನ್ನು ಮಾಡಲಾಗಿದೆ. ಇದು ಚುನಾವಣೆ ನಡೆಯುವ ರಾಜ್ಯಗಳು ಮತ್ತು ಇತರ ಎಲ್ಲ ರಾಜ್ಯಗಳನ್ನು ಒಳ್ಳಗೊಳ್ಳುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.