
ಬಜೆಟ್ ಪ್ರತಿಯೊಂದಿಗೆ ನಿರ್ಮಲಾ ಸೀತಾರಾಮನ್
– ಪಿಟಿಐ ಚಿತ್ರ
ಸತತ 9ನೇ ಬಾರಿಗೆ ಬಜೆಟ್ ಮಂಡನೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಜ್ಜಾಗಿದ್ದಾರೆ. ಫೆಬ್ರುವರಿ 1ರಂದು ಅವರು ಲೋಕಸಭೆಯಲ್ಲಿ ಬಜೆಟ್ ಭಾಷಣ ಮಾಡಲಿದ್ದು, ಅಂತಿಮ ಹಂತದ ತಯಾರಿ ಪ್ರಗತಿಯಲ್ಲಿದೆ. ಅಧಿಕಾರಿಗಳು, ಹಣಕಾಸು ಇಲಾಖೆ ಸಿಬ್ಬಂದಿ ಬಜೆಟ್ ತಯಾರಿಲ್ಲಿ ಪಾಲ್ಗೊಳ್ಳುತ್ತಾರೆ.
ಜಾಗತಿಕ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಇರುವುದರಿಂದ ಈ ಬಜೆಟ್ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆರ್ಥಿಕ ಬೆಳವಣಿಗೆ ಹೆಚ್ಚಿಸುವುದರ ಜೊತೆಗೆ, ಜನಸಾಮಾನ್ಯರಿಗೂ ಲಾಭವಾಗುವಂತಹ ಬಜೆಟ್ ನೀಡುವ ಸವಾಲು ಕೇಂದ್ರ ಸರ್ಕಾರದ ಮುಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಇದಾಗಿದ್ದು, ಜನರ ನಿರೀಕ್ಷೆಯೂ ಹೆಚ್ಚಿದೆ.
ಬಜೆಟ್ ತಯಾರಿಸುವಲ್ಲಿ ಅಧಿಕಾರಿಗಳ ಪಾತ್ರವೂ ಮುಖ್ಯವಾದುದ್ದು. ಬಜೆಟ್ ತಂಡದಲ್ಲಿರುವ ಪ್ರಮುಖ ಅಧಿಕಾರಿಗಳು ಯಾರೆಲ್ಲಾ ಎನ್ನುವ ಮಾಹಿತಿ ಇಲ್ಲಿದೆ.
1. ಅನುರಾಧಾ ಠಾಕೂರ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ
ಇವರು ಈ ಬಜೆಟ್ನ ಶಿಲ್ಪಿ, ಆರ್ಥಿಕ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥೆ. ಆರ್ಥಿಕ ಚೌಕಟ್ಟು ಮತ್ತು ಸಂಪನ್ಮೂಲ ಹಂಚಿಕೆಯನ್ನು ರೂಪಿಸುವಲ್ಲಿ ಇವರದು ನಿರ್ಣಾಯಕ ಪಾತ್ರ. ಬಜೆಟ್ ದಾಖಲೆಗಳನ್ನು ರಚಿಸುವ ಜವಾಬ್ದಾರಿಯುತ ವಿಭಾಗವನ್ನೂ ಇವರೇ ಮುನ್ನಡೆಸುತ್ತಾರೆ.
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಇದು ಅವರ ಮೊದಲ ಬಜೆಟ್. ಹಿಮಾಚಲ ಪ್ರದೇಶ ಕೇಡರ್ನ 1994ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಠಾಕೂರ್ ಜುಲೈ 1, 2025 ರಂದು ಇಲಾಖೆಯ ಅಧಿಕಾರ ವಹಿಸಿಕೊಂಡಿದ್ದಾರೆ. ಇಲಾಖೆಯ ಮುಖ್ಯಸ್ಥರಾಗಿರುವ ಮೊದಲ ಮಹಿಳಾ ಐಎಎಸ್ ಅಧಿಕಾರಿ ಎನ್ನುವ ಅಗ್ಗಳಿಕೆಯೂ ಅವರದ್ದು.
2. ಅರವಿಂದ ಶ್ರೀವಾಸ್ತವ, ಕಂದಾಯ ಕಾರ್ಯದರ್ಶಿ
ತೆರಿಗೆ ಪ್ತಸ್ತಾಪಗಳ ಬಗ್ಗೆ ಇವರು ನೋಡಿಕೊಳ್ಳುತ್ತಾರೆ. ಒದು ಬಜೆಟ್ ಭಾಷಣದ ಬಿ ಭಾಗದಲ್ಲಿ ಇರುತ್ತದೆ. ನೇರ ತೆರಿಗೆಗಳಾದ ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ, ಪರೋಕ್ಷ ತೆರಿಗೆಗಳಾದ ಜಿಎಸ್ಟಿ ಹಾಗೂ ಕಸ್ಟಮ್ಸ್ ಸುಂಕವನ್ನು ಇವರ ತಂಡ ನೋಡಿಕೊಳ್ಳುತ್ತದೆ.
ಕಂದಾಯ ಕಾರ್ಯದರ್ಶಿಯಾಗಿ ಇದು ಅವರ ಮೊದಲ ಬಜೆಟ್ ಆಗಿದ್ದರೂ, ಈ ಹಿಂದೆ ಹಣಕಾಸು ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಬಜೆಟ್ ವಿಭಾಗದ ಜಂಟಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಪ್ರಧಾನ ಮಂತ್ರಿ ಕಚೇರಿಯಲ್ಲಿ ಹಣಕಾಸು ವ್ಯವಹಾರಗಳ ವಿಭಾಗದ ಕೆಲಸವನ್ನೂ ನಿರ್ವಹಿಸಿದ್ದಾರೆ.
ಕಸ್ಟಮ್ಸ್ ಸುಂಕ ಹಾಗೂ ಟಿಡಿಎಸ್ನಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದ್ದು, ಆದಾಯ ಸಂಗ್ರಹಣೆಯಲ್ಲಿ ಇವರ ಪಾತ್ರ ನಿರ್ಣಾಯಕವಾಗಿರಲಿದೆ.
3. ಉಮ್ಲುನ್ಮಾಂಗ್ ವುಯಲ್ನಾಮ್, ವೆಚ್ಚ ಕಾರ್ಯದರ್ಶಿ
ಈ ಹುದ್ದೆಯನ್ನು ಸಾಮಾನ್ಯವಾಗಿ ‘ಖಜಾನೆಯ ರಕ್ಷಕ’ ಎಂದು ಕರೆಯಲಾಗುತ್ತದೆ. ಸರ್ಕಾರಿ ಖರ್ಚು, ಸಬ್ಸಿಡಿ ತರ್ಕಬದ್ಧಗೊಳಿಸುವುದು ಮತ್ತು ಕೇಂದ್ರ ಯೋಜನೆಗಳ ಅನುಷ್ಠಾನವನ್ನು ವುಯಲ್ನಾಮ್ ನೋಡಿಕೊಳ್ಳುತ್ತಾರೆ.
ಇಲಾಖೆಯು ಹಣಕಾಸಿನ ಶಿಸ್ತನ್ನು ಜಾರಿಗೊಳಿಸುವುದು, ಹಣಕಾಸಿನ ಕೊರತೆಯನ್ನು ನಿರ್ವಹಿಸುವುದು ಮತ್ತು ಮುಂದಿನ ಹಣಕಾಸು ವರ್ಷಕ್ಕೆ ಖರ್ಚು ಯೋಜನೆಗೆ ಮಾರ್ಗದರ್ಶನ ನೀಡುವ ಕೆಲಸ ಈ ಇಲಾಖೆಯದ್ದು.
4. ಎಂ. ನಾಗರಾಜು, ಹಣಕಾಸು ಸೇವೆಗಳ ಕಾರ್ಯದರ್ಶಿ
ಹಣಕಾಸು ಸೇವೆಗಳ ಇಲಾಖೆಯು ಎಲ್ಲರಿಗೂ ಹಣಕಾಸು ಸೇವೆಗಳು ಸಿಗುವಂತೆ ನೋಡಿಕೊಳ್ಳುವುದು ಹಾಗೂ ಸಾಮಾಜಿಕ ಭದ್ರತಾ ಯೋಜನೆಯನ್ನು ಮೇಲ್ವಿಚಾರಣೆಯನ್ನು ಇವರು ನೋಡಿಕೊಳ್ಳುತ್ತಾರೆ.
ನಾಗರಾಜು ಅವರ ಅಧೀನದಲ್ಲಿ ಇಲಾಖೆಯು ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಪಿಂಚಣಿ ಸಂಸ್ಥೆಗಳನ್ನು ನೋಡಿಕೊಳ್ಳುತ್ತದೆ.
5. ಅರುಣೀಶ್ ಚಾವ್ಲಾ, ಡಿಐಪಿಎಎಂ ಕಾರ್ಯದರ್ಶಿ
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿಯಾಗಿ, ಚಾವ್ಲಾ ಸರ್ಕಾರದ ಹೂಡಿಕೆ ಹಿಂತೆಗೆತ ಮತ್ತು ಖಾಸಗೀಕರಣದ ಮಾರ್ಗಸೂಚಿಗೆ ಜವಾಬ್ದಾರರಾಗಿರುತ್ತಾರೆ. ಅವರ ಇಲಾಖೆಯು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಪಾಲು ಮಾರಾಟದಿಂದ ಉಂಟಾಗುವ ತೆರಿಗೆಯೇತರ ಆದಾಯ ಗುರಿಗಳನ್ನು ನಿರ್ವಹಿಸುತ್ತದೆ.
6. ಕೆ ಮೋಸೆಸ್ ಚಲೈ, ಸಾರ್ವಜನಿಕ ಉದ್ಯಮಗಳ ಇಲಾಖೆಯ ಕಾರ್ಯದರ್ಶಿ
ಇವರು ಆಯ್ದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಬಂಡವಾಳ ವೆಚ್ಚ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಬಜೆಟ್ ಹಂಚಿಕೆಗಳ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯುತ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಈ ಇಲಾಖೆಯು ಆದಾಯ ಹೆಚ್ಚಿಸುವ ಪ್ರಯತ್ನಗಳು ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳ ಒಟ್ಟಾರೆ ಆರ್ಥಿಕ ಸ್ಥಿತಿಗತಿಯ ಮೇಲ್ವಿಚಾರಣೆ ಮಾಡುತ್ತದೆ.
7. ವಿ. ಅನಂತ ನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರ
ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರು ಇಲಾಖೆಗಳ ಹೊರತಾಗಿ, ಮುಖ್ಯ ಆರ್ಥಿಕ ಸಲಹೆಗಾರರ ಕಚೇರಿಯು ಬಜೆಟ್ಗೆ ನಿರ್ಣಾಯಕ ಒಳಹರಿವುಗಳನ್ನು ಒದಗಿಸುತ್ತದೆ. ಬೆಳವಣಿಗೆಯ ಮುನ್ಸೂಚನೆಗಳು, ಕೃಷಿ, ಕೈಗಾರಿಕೆ ಮತ್ತು ಸೇವೆಗಳಾದ್ಯಂತ ವಲಯ ವಿಶ್ಲೇಷಣೆ ಮತ್ತು ಜಾಗತಿಕ ಅಪಾಯಗಳ ಮೌಲ್ಯಮಾಪನಗಳು ಸೇರಿದಂತೆ ಆರ್ಥಿಕ ಸಂದರ್ಭವನ್ನು ವ್ಯಾಖ್ಯಾನಿಸಲು ನಾಗೇಶ್ವರನ್ ಅವರ ಕಚೇರಿ ಸಹಾಯ ಮಾಡುತ್ತದೆ. ಆರ್ಥಿಕ ಸುಧಾರಣೆಗಳು, ಹಣಕಾಸು ನೀತಿ ಮತ್ತು ಹಣಕಾಸು ಕಾರ್ಯತಂತ್ರದ ಕುರಿತು ಹಣಕಾಸು ಸಚಿವರಿಗೆ ಸಲಹೆ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.