ಅರಸೀಕೆರೆ (ಹಾಸನ ಜಿಲ್ಲೆ): ಇಲ್ಲಿನ ಎಪಿಎಂಸಿಯಲ್ಲಿ ಮಂಗಳವಾರ ಕ್ವಿಂಟಲ್ ಉಂಡೆ ಕೊಬ್ಬರಿ ಧಾರಣೆಯು ₹21ಸಾವಿರ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಬೇಡಿಕೆಯಷ್ಟು ಕೊಬ್ಬರಿ ಆವಕ ಇಲ್ಲದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರುವ ಸಾಧ್ಯತೆ ಇದೆ ಎಂದು ವರ್ತಕರು ತಿಳಿಸಿದ್ದಾರೆ.
ಎಣ್ಣೆ ತಯಾರಿಕೆಗೆ ಕೊಬ್ಬರಿ ಹೆಚ್ಚು ಬಳಕೆಯಾಗುತ್ತಿದೆ. ಆದರೆ, ರೈತರು ಎಳನೀರು ಹಾಗೂ ತೆಂಗಿನಕಾಯಿಗಳನ್ನು ಹೆಚ್ಚಾಗಿ ಮಾರಾಟ ಮಾಡುತ್ತಿರುವುದರಿಂದ ಉಂಡೆ ಕೊಬ್ಬರಿ ಆವಕ ಕಡಿಮೆಯಾಗಿದೆ. ತಾಲ್ಲೂಕಿನ ತೆಂಗಿನ ಮರಗಳಲ್ಲಿ ರೋಗ ಬಾಧೆಯಿಂದ ಇಳುವರಿ ಕುಸಿತವಾಗಿದ್ದು, ಮರಗಳಲ್ಲಿ ಫಸಲು ಕಡಿಮೆಯಾಗಿದೆ. ಹಾಗಾಗಿ, ಕೊಬ್ಬರಿ ಬೆಲೆ ಹೆಚ್ಚಿದರೂ, ಬಹುಪಾಲು ಬೆಳೆಗಾರರಿಗೆ ಪ್ರಯೋಜನ ಸಿಗದಂತಾಗಿದೆ.
‘ಶ್ರಾವಣ ಮಾಸದ ನಂತರ ದೀಪಾವಳಿ, ದಸರಾ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಉಂಡೆ ಕೊಬ್ಬರಿಗೆ ಹೆಚ್ಚು ಬೇಡಿಕೆ ಬರಲಿದ್ದು, ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ₹25 ಸಾವಿರ ತಲುಪಬಹುದು’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಸಿ.ಎಲ್. ಸಿದ್ದರಂಗಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.