ಮುಂಬೈ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಗೆ ‘ಭೀತಿ ಮೂಡಿಸಿಲ್ಲ’ ಎಂದು ಕಂಪನಿಯ ಸಿಇಒ ಕೆ. ಕೃತಿವಾಸನ್ ಹೇಳಿದ್ದಾರೆ.
ಹಿರಿಯ ಶ್ರೇಣಿಗಳಲ್ಲಿ ಇರುವ ಉದ್ಯೋಗಿಗಳು ಎ.ಐ ಸಂಬಂಧಿತ ಕೆಲಸಗಳನ್ನು ನಿಧಾನವಾಗಿ ಮಾಡುತ್ತಾರೆ, ಯುವ ಉದ್ಯೋಗಿಗಳು ಆ ಕೆಲಸವನ್ನು ಬೇಗನೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
‘ನಮ್ಮ ವರಮಾನದ ಮೇಲೆ ಪರಿಣಾಮ ಉಂಟಾದರೂ ಚಿಂತೆ ಇಲ್ಲ, ನಮ್ಮ ಜೊತೆಗಾರರು ಗ್ರಾಹಕರ ಬಳಿ ಹೋಗಿ ಎ.ಐ ಬಳಕೆ ಮಾಡಬೇಕು ಎಂದು ನಾವು ಹೇಳುತ್ತೇವೆ’ ಎಂದು ಅವರು ಇಲ್ಲಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಟಿಸಿಎಸ್ ಕಂಪನಿಯು ಆರು ಲಕ್ಷಕ್ಕೂ ಹೆಚ್ಚಿನ ನೌಕರರನ್ನು ಹೊಂದಿದೆ. ನೌಕರರೆಲ್ಲ ಎ.ಐ ತಂತ್ರಜ್ಞಾನವನ್ನು ಕರತಲಾಮಲಕ ಮಾಡಿಕೊಳ್ಳಬೇಕು ಎಂದು ಕಂಪನಿ ಬಯಸುತ್ತಿದೆ ಎಂದು ಕೃತಿವಾಸನ್ ಹೇಳಿದ್ದಾರೆ.
ಕಂಪನಿಯ ವಿವಿಧ ಯೋಜನೆಗಳಲ್ಲಿ, ಕೆಲಸಗಳಲ್ಲಿ ಎ.ಐ ತಂತ್ರಜ್ಞಾನದ ಬಳಕೆಯನ್ನು ಪರಿಶೀಲಿಸಲು ಕೋರಲಾಗಿದೆ. ಎಲ್ಲರೂ ಎ.ಐ ಕೌಶಲ ಕಲಿಯಲು ತಾವಾಗಿಯೇ ಬಯಸುತ್ತಿದ್ದಾರೆ, ಹೀಗಾಗಿ ಅದನ್ನು ಕಲಿಯುವುದಕ್ಕೆ ಉತ್ತೇಜನ ನೀಡುವ ಪ್ರಶ್ನೆ ಎದುರಾಗದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.