ADVERTISEMENT

ಆಂಧ್ರಪ್ರದೇಶ | ಬೆಳೆಗಾರರಿಗೆ ಎಂಐಎಸ್‌ ವರದಾನ: ಮೆಣಸಿನಕಾಯಿ ಬೆಲೆ ಚೇತರಿಕೆ

ಪಿಟಿಐ
Published 16 ಮಾರ್ಚ್ 2025, 13:13 IST
Last Updated 16 ಮಾರ್ಚ್ 2025, 13:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಿಜಯವಾಡ: ಆಂಧ್ರಪ್ರದೇಶದಲ್ಲಿ ಜಾರಿಗೊಂಡಿರುವ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಿಂದ (ಎಂಐಎಸ್‌) ಒಣಮೆಣಸಿನಕಾಯಿ ಬೆಲೆಯು ಚೇತರಿಕೆ ಕಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು, ಬೆಳೆಗಾರರಿಗೆ ವರದಾನವಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಕ್ವಿಂಟಲ್‌ಗೆ ₹27 ಸಾವಿರ ಇದ್ದ ದರವು ₹7 ಸಾವಿರಕ್ಕೆ ಕುಸಿದಿತ್ತು. ಬೆಲೆ ಕುಸಿತದಿಂದ ರಾಯಲಸೀಮೆ, ಗುಂಟೂರ್‌ ಮತ್ತು ಪಲ್ನಾಡು ಭಾಗದ ಸಾವಿರಾರು ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.

ADVERTISEMENT

ರೈತರ ಹಿತದೃಷ್ಟಿಯಿಂದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ಕೊರತೆ ಪಾವತಿ ಸೌಲಭ್ಯ ಕಲ್ಪಿಸುವಂತೆ ಆಂಧ್ರಪ್ರದೇಶದ ಸರ್ಕಾರವು, ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಂಟಿಯಾಗಿ ಫೆಬ್ರುವರಿ 25ರಂದು ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಒಣಮೆಣಸಿನಕಾಯಿ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. 

ಪ್ರತಿ ಕ್ವಿಂಟಲ್‌ಗೆ ₹11,781 ಕನಿಷ್ಠ ಮಧ್ಯಸ್ಥಿಕೆ ಬೆಲೆ ನಿಗದಿಪಡಿಸಲಾಗಿದೆ. ಒಟ್ಟು ಉತ್ಪಾದನೆ ಪೈಕಿ ಶೇ 25ರಷ್ಟು ಒಣಮೆಣಸಿನಕಾಯಿ ಖರೀದಿಗೆ ಕೇಂದ್ರವು ಒಪ್ಪಿಗೆ ನೀಡಿದೆ. 

ಎಷ್ಟು ಬೆಲೆ ಏರಿಕೆ‌?: ಸರ್ಕಾರದಿಂದ ಖರೀದಿ ಆರಂಭಿಸಿದ ಬೆನ್ನಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಬೆಲೆಯು ಶೇ 15ರಿಂದ ಶೇ 20ರಷ್ಟು ಹೆಚ್ಚಳವಾಗಿದೆ. ಪ್ರತಿ ಕ್ವಿಂಟಲ್‌ಗೆ ₹3 ಸಾವಿರದವರೆಗೂ ಏರಿಕೆಯಾಗಿದೆ. ಕೆಲವು ತಳಿಗಳನ್ನು ಕ್ವಿಂಟಲ್‌ಗೆ ₹14 ಸಾವಿರ ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಫೆಬ್ರುವರಿ 11ರಂದು ಮುಕ್ತ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ 334 ತಳಿ ಮತ್ತು ನಂ. 5 ತಳಿಯ ದರವು ಕ್ವಿಂಟಲ್‌ಗೆ ₹11,500 ಇತ್ತು. ಎಂಐಎಸ್‌ ಅಡಿ ಖರೀದಿ ಆರಂಭಗೊಂಡ ಬಳಿಕ ಈ ತಳಿಗಳ ಬೆಲೆಯು ಕ್ವಿಂಟಲ್‌ಗೆ ಕ್ರಮವಾಗಿ ₹12,500 ಮತ್ತು ₹13 ಸಾವಿರ ಆಗಿದೆ. 314 ಹೆಸರಿನ ತಳಿಯ ಬೆಲೆಯು ₹13 ಸಾವಿರದಿಂದ ₹13,900ಕ್ಕೆ ತಲುಪಿದೆ. ತೇಜ ತಳಿಯ ಮೆಣಸಿನಕಾಯಿ ಬೆಲೆಯು ₹14 ಸಾವಿರಕ್ಕೆ ಮುಟ್ಟಿದೆ.  

ರೈತರು, ಕೃಷಿ ತಜ್ಞರು ಮತ್ತು ವ್ಯಾಪಾರಿಗಳೊಟ್ಟಿಗೆ ಚರ್ಚಿಸಿದ ಬಳಿಕವೇ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ. ಇದು ಜಾರಿಗೊಂಡ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಾರುಕಟ್ಟೆಯಲ್ಲಿ ಕೃಷಿ ಹುಟ್ಟುವಳಿಗಳ ಬೆಲೆ ಏರಿಳಿತವಾದಾಗ ಎಂಐಎಸ್‌ ಜಾರಿ ಮೂಲಕ ಸರ್ಕಾರವು ಮಧ್ಯ‍ಪ್ರವೇಶಿಸಲು ಅವಕಾಶವಿದೆ. ಇದರಿಂದ ಬೆಳೆಗಾರರಿಗೆ ಆಗುವ ನಷ್ಟ ತಪ್ಪಲಿದೆ. ಆಂಧ್ರಪ್ರದೇಶ ಸರ್ಕಾರವು ಸಕಾಲದಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿರುವುದರಿಂದ ಒಣಮೆಣಸಿನಕಾಯಿ ಬೆಳೆಗಾರರಿಗೆ ಅನುಕೂಲವಾಗಿದೆ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.