ADVERTISEMENT

ಅನಿಲ್ ಅಂಬಾನಿ ಕಂಪನಿಗೆ ಸಾಲ: ‘ವಂಚನೆ’ ವರ್ಗೀಕರಣ ಹಿಂಪಡೆದ ಕೆನರಾ ಬ್ಯಾಂಕ್‌

ಪಿಟಿಐ
Published 10 ಜುಲೈ 2025, 12:37 IST
Last Updated 10 ಜುಲೈ 2025, 12:37 IST
ಅನಿಲ್ ಅಂಬಾನಿ
ಅನಿಲ್ ಅಂಬಾನಿ   

ಮುಂಬೈ: ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಸಂಬಂಧಿಸಿದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿಯ ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಕೆನರಾ ಬ್ಯಾಂಕ್‌, ಬಾಂಬೆ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.

ಬ್ಯಾಂಕ್‌ನ ಆದೇಶವನ್ನು ಪ್ರಶ್ನಿಸಿ ಅನಿಲ್ ಅಂಬಾನಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರು ಇದ್ದ ವಿಭಾಗೀಯ ಪೀಠವು ನಡೆಸುತ್ತಿತ್ತು. ಕೆನರಾ ಬ್ಯಾಂಕ್‌ ನೀಡಿದ ಮಾಹಿತಿಯನ್ನು ಪರಿಗಣಿಸಿದ ಪೀಠವು, ಅರ್ಜಿಯನ್ನು ಇತ್ಯರ್ಥಪಡಿಸಿತು.

‘ವಂಚನೆ’ ಎಂದು ವರ್ಗೀಕರಿಸಿದ್ದ ಆದೇಶ ಹಿಂಪಡೆದಿರುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ತಿಳಿಸಬೇಕು ಎಂದು ಪೀಠವು ಹೇಳಿದೆ.

ADVERTISEMENT

ಅನಿಲ್ ಅಂಬಾನಿ ಅವರ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಪಡೆದ ಸಾಲದ ಖಾತೆಗೆ ಸಂಬಂಧಿಸಿದ ವಿಷಯ ಇದಾಗಿದೆ. ಕಂಪನಿಯು ದಿವಾಳಿ ಸಂಹಿತೆಯ ಅಡಿಯಲ್ಲಿ ಕಾರ್ಪೊರೇಟ್‌ ದಿವಾಳಿ ಪರಿಹಾರ ಪ್ರಕ್ರಿಯೆ ಎದುರಿಸುತ್ತಿದೆ.

ಸಾಲದ ಖಾತೆಯನ್ನು ‘ವಂಚನೆ’ ಎಂದು ಕೆನರಾ ಬ್ಯಾಂಕ್‌ 2024ರ ನವೆಂಬರ್‌ 8ರಂದು ವರ್ಗೀಕರಿಸಿತ್ತು. 2017ರಲ್ಲಿ ನೀಡಿದ್ದ ₹1,050 ಕೋಟಿ ಸಾಲವನ್ನು ಕಂಪನಿಯು ಸಮೂಹದ ಇನ್ನೊಂದು ಕಂಪನಿಗೆ ವರ್ಗಾಯಿಸಿ, ಬೇರೆ ಪಾವತಿಗಳಿಗೆ ಬಳಕೆ ಮಾಡಿಕೊಂಡಿತ್ತು ಎಂದು ಬ್ಯಾಂಕ್‌ ಹೇಳಿತ್ತು.

ಆದರೆ ಈ ಆದೇಶಕ್ಕೆ ಈ ವರ್ಷದ ಫೆಬ್ರುವರಿಯಲ್ಲಿ ಹೈಕೋರ್ಟ್‌ ತಡೆ ನೀಡಿತ್ತು. ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸುವ ಮೊದಲು ತಮ್ಮ ವಾದವನ್ನು ಆಲಿಸಿಲ್ಲ ಎಂದು ಅನಿಲ್ ಅಂಬಾನಿ ಅವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು.

ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸುವ ಮೊದಲು ಸಾಲ ಪಡೆದವರ ವಾದ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಸೂಚನೆಯನ್ನು ಮತ್ತೆ ಮತ್ತೆ ಉಲ್ಲಂಘಿಸಿದ ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐ ಕ್ರಮ ಕೈಗೊಳ್ಳಲಿದೆಯೇ ಎಂದು ಹೈಕೋರ್ಟ್‌ ಪ್ರಶ್ನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.