ADVERTISEMENT

ಅಡಕೆ ಪರ ಹೋರಾಟ: ಮನವಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 20:28 IST
Last Updated 13 ಫೆಬ್ರುವರಿ 2020, 20:28 IST
ವಿವಿಧ ರೈತ ಸಂಘಟನೆಗಳ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್.
ವಿವಿಧ ರೈತ ಸಂಘಟನೆಗಳ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್.   

ಬೆಂಗಳೂರು: ಅಡಕೆ ಆರೋಗ್ಯಕ್ಕೆ ಹಾನಿಕಾರವಲ್ಲ ಎಂಬ ಕ್ಲಿನಿಕಲ್‌ ವರದಿ ತಯಾರಿಸಬೇಕು. ಈ ಮೂಲಕ ಅಡಕೆ ಬೆಳೆಗಾರರ ಆತಂಕವನ್ನು ದೂರ ಮಾಡಬೇಕು ಎಂದು ಅಡಕೆ ಕಾರ್ಯಪಡೆ ಸರ್ಕಾರದ ಮೇಲೆ ಒತ್ತಡ ಹೇರಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಬಜೆಟ್‌ ಪೂರ್ವ ಸಭೆಯಲ್ಲಿ ಅಡಕೆ ಕಾರ್ಯಪಡೆ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.

‘ಅಡಕೆ ವಿಷಯ ಸುಪ್ರೀಂಕೋರ್ಟ್‌ನಲ್ಲಿದ್ದು, ಈ ವಿಷಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ರಾಜ್ಯ ಸರ್ಕಾರವೇ ನೇಮಿಸಬೇಕು. ಇದರಿಂದ ಅಡಕೆ ಬೆಳೆಗಾರರಿಗೆ ಬಲ ಬಂದಂತಾಗುತ್ತದೆ. ಸರ್ಕಾರವೇ ಜವಾಬ್ದಾರಿ ತೆಗೆದುಕೊಂಡರೆ ಪ್ರಕರಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತದೆ’ ಎಂದು ಕಾರ್ಯಪಡೆ ಸದಸ್ಯ ಹಾಗೂ ಹಿರಿಯ ಸಹಕಾರಿ ಮಂಜಪ್ಪ ತಿಳಿಸಿದರು.

ADVERTISEMENT

‘ಅಡಕೆ ಹಾನಿಕಾರಕ ಅಲ್ಲ ಎಂಬುದನ್ನು ನಿರೂಪಿಸಲು ತಕ್ಷಣವೇ ತಜ್ಞರ ತಂಡವನ್ನು ರಚಿಸಬೇಕು. ತಂಡ ನೀಡುವ ವೈಜ್ಞಾನಿಕ ವರದಿಯಿಂದ ನ್ಯಾಯಾಲಯಕ್ಕೂ ಮನವರಿಕೆಯಾಗುತ್ತದೆ. ಅಲ್ಲದೆ, ಅಡಕೆಗೆ ಬಾಧಿಸುತ್ತಿರುವ ರೋಗಗಳು ಮತ್ತು ಅದಕ್ಕೆ ಪರಿಹಾರದ ಬಗ್ಗೆ ಸಂಶೋಧನೆಗಳನ್ನು ನಡೆಸಬೇಕಾಗಿದೆ. ಇದಕ್ಕಾಗಿ ಆಯ–ವ್ಯಯದಲ್ಲಿ ₹10 ಕೋಟಿ ನಿಗದಿ ಮಾಡಬೇಕು’ ಎಂದು ಮುಖ್ಯ
ಮಂತ್ರಿಯವರಿಗೆ ಮನವಿ ಮಾಡಿದ್ದಾಗಿ ಹೇಳಿದರು. ನಿಯೋಗದಲ್ಲಿ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ, ಕೊಂಕೋಡಿ ಪದ್ಮನಾಭ ಮತ್ತಿತರರು ಇದ್ದರು.

ಜೀವ ವೈವಿಧ್ಯ ಮಂಡಳಿ ಬೇಡಿಕೆಗಳು:

* ರಾಜ್ಯದಲ್ಲಿ 22 ಪ್ರಮುಖ ನದಿಗಳು ಮತ್ತು 180 ಉಪನದಿಗಳ ಮೂಲಗಳಿವೆ. ಈ ನದಿ ಮೂಲಗಳ ಸಂರಕ್ಷಣೆ ವಿಶೇಷ ಯೋಜನೆ ರೂಪಿಸಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಬೇಕು.

* ಉತ್ತರ ಕರ್ನಾಟಕ– ಕಲ್ಯಾಣ ಕರ್ನಾಟಕ ಸೇರಿ ಬಯಲು ಸೀಮೆ ಭೂ ಪ್ರದೇಶ ಮರುಭೂಮಿ ಆಗುವುದನ್ನು ತಪ್ಪಿಸಲು ಬಯಲುಸೀಮೆಯ ವನ ವಿಕಾಸ ಯೋಜನೆಯನ್ನು ಈ ಪ್ರದೇಶದಲ್ಲಿ ಜಾರಿ ಮಾಡಬೇಕು.

*ಉತ್ತರಕನ್ನಡ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ ಸೊಪ್ಪಿನ ಬೆಟ್ಟ ಪ್ರದೇಶವಿದೆ. ರೈತರ ಸಹಭಾಗಿತ್ವದಲ್ಲಿ 5 ಸಾವಿರ ಹೆಕ್ಟೇರ್‌ ಸೊಪ್ಪಿನ ಬೆಟ್ಟ ಅಭಿವೃದ್ಧಿ ಯೋಜನೆ ಸೇರ್ಪಡೆ ಮಾಡಬೇಕು.

*ಕರಾವಳಿ ಪರಿಸರ ರಕ್ಷಣೆಗೆ ಮಹತ್ವದ ಕೊಡುಗೆ ನೀಡುವ ಮೀನುಗಾರರು, ರೈತರು, ರೈತರು ಇಷ್ಟಪಟ್ಟಿರುವ ಕರಾವಳಿ ಹಸಿರು ಕವಚ ಎಂಬ ವನೀಕರಣ ಯೋಜನೆಯನ್ನು ಪುನಃ ಜಾರಿಗೆ ತರಬೇಕು.

*ಕೇಂದ್ರ ಸರ್ಕಾರದ ಬಿದಿರು ಬೆಳೆಸುವ ಬಿದಿರು ಬಂಗಾರ ಯೋಜನೆಯನ್ನು ರಾಜ್ಯದಲ್ಲೂ ಜಾರಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.