
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ನ (ಬಿಎಸ್ಎನ್ಎಲ್) ವರಮಾನವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹5,347 ಕೋಟಿಯಷ್ಟು ಆಗಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹5,740 ಕೋಟಿ ವರಮಾನ ಗಳಿಸುವ ಅಂದಾಜು ಮಾಡಲಾಗಿತ್ತು. ಈ ಪೈಕಿ ₹5,347 ಕೋಟಿ ಗಳಿಸಲಾಗಿದ್ದು, ಒಟ್ಟು ಗುರಿಯ ಶೇ 93ರಷ್ಟು ಸಾಧಿಸಲಾಗಿದೆ ಎಂದು ಗುರುವಾರ ತಿಳಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ನಿಗಮದ ವರಮಾನವು ₹11,134 ಕೋಟಿ ಆಗಿದೆ.
ಪ್ರಸಕ್ತ ಜೂನ್ ತ್ರೈಮಾಸಿಕದಲ್ಲಿ ಬಿಎಸ್ಎನ್ಎಲ್, ತನ್ನ ಪ್ರತಿ ಗ್ರಾಹಕನಿಂದ ತಿಂಗಳೊಂದರಲ್ಲಿ ಪಡೆಯುತ್ತಿರುವ ಸರಾಸರಿ ವರಮಾನವು (ಎಆರ್ಪಿಯು) ₹81 ಇತ್ತು. ಅದು ಸೆಪ್ಟೆಂಬರ್ ತ್ರೈಮಾಸಿದಲ್ಲಿ ₹91ಕ್ಕೆ ಏರಿಕೆ ಆಗಿದ್ದು, ಶೇ 12ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ (ಪೂರ್ವ), ಅಂಡಮಾನ್ ಮತ್ತು ನಿಕೋಬಾರ್, ಜಮ್ಮು ಮತ್ತು ಕಾಶ್ಮೀರದ ವಲಯದಲ್ಲಿ ಎಆರ್ಪಿಯು ಅತ್ಯಧಿಕ ₹214 ಇದೆ. ಆದರೆ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಕೋಲ್ಕತ್ತದ ವಲಯದಲ್ಲಿ ₹60 ಇದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.