ನವದೆಹಲಿ :ಮೊಬೈಲ್ ಸೇವಾ ಸಂಸ್ಥೆಗಳ ಸಂಘವು (ಸಿಒಎಐ)ಆರ್ಥಿಕವಾಗಿ ನಷ್ಟದಲ್ಲಿರುವ ಮೊಬೈಲ್ ಕಂಪನಿಗಳ ಬೆಂಬಲಕ್ಕೆ ನಿಂತಿದೆ.
ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಬಾಕಿ ಪಾವತಿಗೆ ವಿಧಿಸಿರುವ ನಿಯಮಗಳನ್ನು ಸಡಿಲಿಸುವಂತೆ ಹಾಗೂ ಬಾಕಿ ಪಾವತಿಸಲು ಅನುಕೂಲ ಆಗುವಂತೆ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುವುದನ್ನು ಮುಂದುವರಿಸುವಂತೆಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
‘ದೂರಸಂಪರ್ಕ ವಲಯ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿಯೂ ಬ್ಯಾಂಕ್ಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಸರ್ಕಾರವು ಉದ್ಯಮದ ಬೆಂಬಲಕ್ಕೆ ಇದೆ ಎನ್ನುವ ಸ್ಪಷ್ಟ ಸಂದೇಶವನ್ನು ಬ್ಯಾಂಕ್ಗಳಿಗೆ ರವಾನಿಸಬೇಕಾಗಿದೆ.ಸಾಲದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವಂತೆ ಬ್ಯಾಂಕ್ಗಳು ಸತತವಾಗಿ ಹೇಳುತ್ತಲೇ ಬಂದಿವೆ. ಹೊಸ ಸಾಲ ನೀಡಲು ನಿರಾಕರಿಸುತ್ತಿರುವುದಷ್ಟೇ ಅಲ್ಲದೆ ಸಾಲ ಮರುಹೊಂದಾಣಿಕೆಯನ್ನೂ ಮಾಡುತ್ತಿಲ್ಲ’ ಎಂದು ಸಂಘದ ಪ್ರಧಾನ ನಿರ್ದೇಶಕ ರಾಜನ್ ಮ್ಯಾಥೀವ್ಸ್ ಅವರು ದೂರಸಂಪರ್ಕ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
ಪರವಾನಗಿ ಶುಲ್ಕ ಪಾವತಿಸಲು ಬ್ಯಾಂಕ್ ಖಾತರಿ ನೀಡಲಾಗುತ್ತಿದೆ. ಅದನ್ನು ಕೈಬಿಡಬೇಕು. ಒಂದೊಮ್ಮೆ ಬ್ಯಾಂಕ್ ಖಾತರಿ ನೀಡುವ ಅಗತ್ಯ ಇದೆ ಎಂದೇ ಆದಲ್ಲಿ, ಒಟ್ಟಾರೆ ಪರವಾನಗಿ ಶುಲ್ಕದಲ್ಲಿ ಒಂದು ಭಾಗದಷ್ಟಕ್ಕೆ ಇಳಿಕೆ ಮಾಡುವಂತೆ ಬೇಡಿಕೆ ಇಟ್ಟಿದೆ.
ಅಂಕಿ–ಅಂಶ
₹ 1.47 ಲಕ್ಷ ಕೋಟಿ -15 ಮೊಬೈಲ್ ಕಂಪನಿಗಳು ಪಾವತಿಸಬೇಕಿರುವ ಬಾಕಿ ಮೊತ್ತ
60% -ಒಟ್ಟಾರೆ ಬಾಕಿಯಲ್ಲಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ಪಾಲು
ಬೇಡಿಕೆಗಳೇನು
ಎಜಿಆರ್ ಶುಲ್ಕ ಪಾವತಿ ನಿಯಮ ಸಡಿಲಿಸಿ
ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಮುಂದುವರಿಕೆ
ಪರವಾನಗಿ ಶುಲ್ಕವನ್ನು ಶೇ 8 ರಿಂದ ಶೇ 3ಕ್ಕೆ ಇಳಿಕೆ
ತರಂಗಾಂತರ ಬಳಕೆ ಶುಲ್ಕ ತಗ್ಗಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.