ADVERTISEMENT

ಆರ್ಥಿಕತೆಗೆ ಡಿಜಿಟಲ್‌ ಮೂಲಸೌಕರ್ಯ ಅಗತ್ಯ: ನಂದನ್ ನಿಲೇಕಣಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 20:00 IST
Last Updated 22 ಏಪ್ರಿಲ್ 2019, 20:00 IST
ನಂದನ್ ನಿಲೇಕಣಿ
ನಂದನ್ ನಿಲೇಕಣಿ   

ಬೆಂಗಳೂರು: ‘ದೇಶದ ಆರ್ಥಿಕತೆಯ ಪುನಶ್ಚೇತನ ಪ್ರಕ್ರಿಯೆಯಲ್ಲಿ ಡಿಜಿಟಲ್‌ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಇನ್ಫೊಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಅಭಿಪ್ರಾಯಪಟ್ಟರು.

ಸೋಮವಾರ ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ‘ಆರ್ಥಿಕತೆ ಮತ್ತು ಉದ್ಯಮದ ಮೇಲೆ ಡಿಜಿಟಲ್‌ ಭಾರತದ ಪ್ರಭಾವ’ ವಿಷಯದ ಕುರಿತು ಅವರು ಮಾತನಾಡಿದರು.

‘ದೇಶದ ಡಿಜಿಟಲ್‌ ದತ್ತಾಂಶ ವ್ಯವಸ್ಥೆಯಿಂದ ಉದ್ದಿಮೆ ವಹಿವಾಟುಗಳ ಪುನಶ್ಚೇತನ ಸಾಧ್ಯವಾಗಲಿದೆ. ನಿರ್ಧಾರ ತೆಗೆದುಕೊಳ್ಳಲು ದತ್ತಾಂಶವೇ ಮೂಲವಾದಾಗ ಹಲವು ವಲಯಗಳಲ್ಲಿ ಭಾರಿ ಬದಲಾವಣೆಗಳನ್ನು ಕಾಣಬಹುದು.ಜನಸಾಮಾನ್ಯರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ‘ಆಧಾರ್‌ ಆಧಾರಿತ ಇ–ಕೆವೈಸಿ ಮತ್ತು ಆನ್‌ಲೈನ್‌ ಪಾವತಿ ವ್ಯವಸ್ಥೆಗಳು ಕ್ರಾಂತಿಕಾರಕ ನಿರ್ಧಾರಗಳಾಗಿವೆ. ಇಂದು ಯಾವುದೇ ವಲಯದಲ್ಲಾದರೂ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಬಳಸಬಹುದಾಗಿದೆ.

ADVERTISEMENT

‘ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ಜಿಎಸ್‌ಟಿಎನ್‌ ಉತ್ತಮ ಉದಾಹರಣೆಯಾಗಿದೆ. ಬ್ಯಾಂಕ್‌ ಖಾತೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್‌ ಸಂಪರ್ಕಿಸಿರುವುದು ಇನ್ನೊಂದು ಅತಿದೊಡ್ಡ ಸುಧಾರಣೆ’ ಎಂದರು.

ಆಧಾರ್‌ ಕೇವಲ ಗುರುತಿನ ಸಂಖ್ಯೆ: ‘ಆಧಾರ್‌ ಕೇವಲ ಒಂದು ಗುರುತಿನ ಸಂಖ್ಯೆಯಷ್ಟೆ. ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆ ಆಗುವುದಿಲ್ಲ’ ಎಂದು ನಿಲೇಕಣಿ ಸಮರ್ಥಿಸಿಕೊಂಡಿದ್ದಾರೆ.

‘ವ್ಯಕ್ತಿಯ ಗುರುತನ್ನು ಪ್ರಮಾಣಿಕರಿಸಲು ಇರುವ ಒಂದು ಸಂಖ್ಯೆಯಾಗಿದೆ. ಇದು ಅತ್ಯಂತ ಸರಳೀಕೃತ ವ್ಯವಸ್ಥೆಯಾಗಿದೆ.ಒಬ್ಬರ ಮೇಲೆ ನಿಗಾ ಇಡಲು ಇದನ್ನು ದುರ್ಬಳಕೆ ಮಾಡಲು ಮತ್ತು ಖಾಸಗಿ ಸಂಸ್ಥೆಗಳು ಆಧಾರ್‌ ಸಂಖ್ಯೆಯನ್ನು ಸಂಗ್ರಹಿಸಿ ಇಡಲು ಸಾಧ್ಯವಿಲ್ಲ’ ಎಂದರು.

ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ, ಫಿಕ್ಕಿ ಮಾಜಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.