ನವದೆಹಲಿ: ಭಾರತದಲ್ಲೇ ತಯಾರಾದ ರಕ್ಷಣಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳ ರಫ್ತಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಯೋಜನೆ ರೂಪಿಸಿದ್ದು, ಅದಕ್ಕೆ ರಾಜತಾಂತ್ರಿಕ ಮಾರ್ಗಗಳನ್ನೂ ಬಳಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
ದೇಶಿ ರಕ್ಷಣಾ ಉಪಕರಣ ಉದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈಚೆಗೆ ಪ್ರಮುಖ ನೀತಿಯೊಂದನ್ನು ಪ್ರಕಟಿಸಿದ್ದರು. ಇದರ ಅನ್ವಯ, ಒಟ್ಟು 101 ಬಗೆಯ ರಕ್ಷಣಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳ ಆಮದನ್ನು ಹಂತ ಹಂತವಾಗಿ ನಿಷೇಧಿಸಲಾಗುತ್ತದೆ.
‘ಭಾರತದ ಜೊತೆ ಸ್ನೇಹದಿಂದ ಇರುವ ರಾಷ್ಟ್ರಗಳ ಪ್ರತಿನಿಧಿಗಳ ಜೊತೆ ದೇಶಿ ರಕ್ಷಣಾ ಉಪಕರಣ ಉದ್ಯಮದ ಪ್ರತಿನಿಧಿಗಳು ವೆಬ್ ಮಾಧ್ಯಮದ ಮೂಲಕವೇ ಮಾತುಕತೆ ನಡೆಸಲಿದ್ದಾರೆ. ಆ ದೇಶಗಳಿಗೆ ಯಾವ ಬಗೆಯ ಉತ್ಪನ್ನಗಳು, ಉಪಕರಣಗಳ ಅಗತ್ಯ ಇದೆ ಎಂಬುದನ್ನು ಅರಿಯಲಿದ್ದಾರೆ’ ಎಂದು ರಕ್ಷಣಾ ಉುತ್ಪಾದನೆ ಇಲಾಖೆಯ ಕಾರ್ಯದರ್ಶಿ ರಾಜ್ ಕುಮಾರ್ ಅವರು ವೆಬಿನಾರ್ ಒಂದರಲ್ಲಿ ಹೇಳಿದರು.
‘ಭಾರತದ ಮಿತ್ರರಾಷ್ಟ್ರಗಳಿಗೆ ಅಗತ್ಯವಿರಬಹುದಾದ ಉತ್ಪನ್ನಗಳ ಪಟ್ಟಿಯನ್ನು ನಾವು ಸಿದ್ಧಪಡಿಸುತ್ತಿದ್ದೇವೆ. ಹಾಗಾಗಿ, ಈ ಉದ್ಯಮದ ನೇತೃತ್ವದಲ್ಲಿಯೇ ವೆಬ್ ಮಾಧ್ಯಮದ ಮೂಲಕ ಮಾತುಕತೆ ನಡೆಸಲು ಆಲೋಚನೆ ಹಾಕಿಕೊಂಡಿದ್ದೇವೆ’ ಎಂದು ಅವರು ಹೇಳಿದರು. ರಕ್ಷಣಾ ಉತ್ಪನ್ನಗಳು ಹಾಗೂ ಉಪಕರಣಗಳ ರಫ್ತಿಗೆ ಉತ್ತೇಜನ ನೀಡಲು ಸರ್ಕಾರವು ತನ್ನ ರಾಜತಾಂತ್ರಿಕ ಮಾರ್ಗಗಳ ಮೂಲಕ ಉದ್ಯಮಕ್ಕೆ ಹೆಗಲು ಕೊಡಲಿದೆ ಎಂದೂ ಅವರು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.