ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್
–ಪಿಟಿಐ ಚಿತ್ರ
ನವದೆಹಲಿ: ವೇದಾಂತ ಸಮೂಹದ ಬಗ್ಗೆ ಅಮೆರಿಕದ ಶಾರ್ಟ್ ಸೆಲ್ಲರ್ ‘ವೈಸ್ರಾಯ್ ರಿಸರ್ಚ್’ ಸಂಸ್ಥೆ ಸಿದ್ಧಪಡಿಸಿರುವ ವರದಿಯು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಈ ವರದಿಯ ವಿಚಾರವಾಗಿ ಕಾನೂನಿನ ಅಡಿ ಪರಿಹಾರ ಕ್ರಮಕ್ಕೆ ಮುಂದಾಗಲು ವೇದಾಂತ ಸಮೂಹಕ್ಕೆ ಅವಕಾಶ ಇದೆ ಎಂದು ಅವರು ಅಭಿಪ್ರಾಯ ನೀಡಿದ್ದಾರೆ.
ವೇದಾಂತ ಸಮೂಹವು ‘ನಿರ್ವಹಿಸಲು ಸಾಧ್ಯವಾಗದಂತಹ ಸಾಲದ ನೆಲಗಟ್ಟಿನ ಮೇಲೆ ಇಸ್ಪೀಟಿನ ಎಲೆಗಳಿಂದ ಕಟ್ಟಿರುವ ಮನೆಯಂತೆ ಇದೆ’ ಎಂದು ವೈಸ್ರಾಯ್ ರಿಸರ್ಚ್ ಸಂಸ್ಥೆಯು ವರದಿ ಪ್ರಕಟಿಸಿತ್ತು. ಅಲ್ಲದೆ, ವೈಸ್ರಾಯ್ ರಿಸರ್ಚ್ ಸಂಸ್ಥೆಯು ವೇದಾಂತ ರಿಸೋರ್ಸಸ್ನ ಸಾಲಪತ್ರಗಳನ್ನು ಶಾರ್ಟ್ ಸೆಲ್ಲಿಂಗ್ಗೆ ಸಿದ್ಧಪಡಿಸಿಕೊಂಡಿತ್ತು. ಈ ವರದಿಗೆ ಸಂಬಂಧಿಸಿದಂತೆ ಸ್ವತಂತ್ರವಾದ ಕಾನೂನು ಅಭಿಪ್ರಾಯ ನೀಡಬೇಕು ಎಂದು ವೇದಾಂತ ಸಮೂಹವು ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಕೋರಿತ್ತು.
‘ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಷೇರು, ಬಾಂಡ್ಗಳ ಶಾರ್ಟ್ ಸೆಲ್ಲಿಂಗ್ ವಹಿವಾಟಿನಲ್ಲಿ ತೊಡಗಿಕೊಂಡು, ನಂತರ ಅಂತಹ ಕಂಪನಿಗಳ ಬಗ್ಗೆ ತಪ್ಪುದಾರಿಗೆ ಎಳೆಯುವ ವರದಿ ಪ್ರಕಟಿಸಿ, ಅದರಿಂದ ಮಾರುಕಟ್ಟೆಯ ಮೇಲೆ ಆಗುವ ಪರಿಣಾಮದ ಸಂದರ್ಭದಲ್ಲಿ ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಚರಿತ್ರೆಯು ಈ ಸಂಸ್ಥೆಗೆ ಇದೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯ ನೀಡಿದ್ದಾರೆ ಎಂದು ವೇದಾಂತ ಸಮೂಹವು ಷೇರುಪೇಟೆಗೆ ಮಾಹಿತಿ ನೀಡಿದೆ.
ವೇದಾಂತ ಸಮೂಹದ ಬಗ್ಗೆ ವೈಸ್ರಾಯ್ ರಿಸರ್ಚ್ ಪ್ರಕಟಿಸಿರುವ ವರದಿಯು ಗಂಭೀರ ಆರೋಪಗಳನ್ನು ಒಳಗೊಂಡಿದೆ, ವೇದಾಂತ ಸಮೂಹದ ವಹಿವಾಟುಗಳಿಗೆ ಹಾಗೂ ಪ್ರತಿಷ್ಠೆಗೆ ಕೆಡುಕು ಉಂಟುಮಾಡುವಂತೆ ಇದೆ ಎಂದು ಅವರು ಅಭಿಪ್ರಾಯ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.