ADVERTISEMENT

ಚಿನ್ನದ ಸಾಲ: ರೈತರು, ಜನಸಾಮಾನ್ಯರಿಗೆ ಹೊರೆಯಾದ ನಿಯಮ

ವಾಯಿದೆ ಮುಕ್ತಾಯದ ಬಳಿಕ ಅಸಲು ಪಾವತಿ ಕಡ್ಡಾಯ

ಆರ್.ಜಿತೇಂದ್ರ
Published 21 ಮೇ 2025, 19:31 IST
Last Updated 21 ಮೇ 2025, 19:31 IST
.
.   

ಮೈಸೂರು: ಚಿನ್ನದ ಅಡಮಾನ ಸಾಲ ಮರುಪಾವತಿಯಲ್ಲಿ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಅನುಸರಿಸುತ್ತಿರುವ ಬಿಗಿ ನಿಯಮಗಳು ರೈತರು ಹಾಗೂ ಜನಸಾಮಾನ್ಯರನ್ನು ಮತ್ತೆ ಲೇವಾದೇವಿ ದಾರರ ಬಳಿಗೆ ದೂಡುತ್ತಿವೆ.

ಬ್ಯಾಂಕುಗಳಲ್ಲಿ ಪಡೆಯುವ ಚಿನ್ನದ ಸಾಲವನ್ನು ನಿಗದಿತ ಅವಧಿಯ ಕೊನೆಗೆ (ಗರಿಷ್ಠ 12 ತಿಂಗಳು) ಬಡ್ಡಿ‌ ಮಾತ್ರ ಪಾವತಿಸಿ ಗ್ರಾಹಕರು ನವೀಕರಿಸುತ್ತಿದ್ದರು. ಆದರೆ ಆರ್‌ಬಿಐ ಈಚೆಗೆ ಸುತ್ತೋಲೆ ಹೊರಡಿಸಿದ್ದು, ಬಡ್ಡಿಯನ್ನಷ್ಟೇ ಕಟ್ಟಿಸಿಕೊಂಡು ಸಾಲ ನವೀಕರಿಸುವಂತಿಲ್ಲ ಎಂದು ಬ್ಯಾಂಕು ಗಳಿಗೆ ತಾಕೀತು ಮಾಡಿದೆ. ಸಾಲ ಪಡೆದವರು ಬಡ್ಡಿ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಸಾಲದ ಮೊತ್ತವನ್ನು ಮರುಪಾವತಿಸಬೇಕು. ನಂತರವಷ್ಟೇ ಹೊಸ ಅರ್ಜಿ ಸಲ್ಲಿಸಿ ಮತ್ತೆ ಸಾಲ ಪಡೆಯಬಹುದು.

ಕೃಷಿ, ವ್ಯಾಪಾರಕ್ಕಾಗಿ ಜನ ತಮ್ಮಲ್ಲಿನ ಚಿನ್ನವನ್ನು ಒತ್ತೆ ಇಟ್ಟು ಸಾಲ ಪಡೆದಿರುತ್ತಾರೆ. ಅಸಲು ಹೊಂದಿಸುವವರೆಗೆ ಬಡ್ಡಿ ಕಟ್ಟಿ ಸಾಲ ನವೀಕರಿಸಿ ಕೊಳ್ಳುತ್ತಿದ್ದಾರೆ. ಖಾಸಗಿ ಲೇವಾದೇವಿದಾರರು ಹಾಗೂ ಹಣಕಾಸು ಸಂಸ್ಥೆಗಳು ವಿಧಿಸುವ ದುಬಾರಿ ಬಡ್ಡಿಗೆ ಹೋಲಿಸಿದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿದರ ಕಡಿಮೆ ಇದ್ದು (ಶೇ 9– 10) ಇವುಗಳಲ್ಲಿ ಸಾಲ ಪಡೆಯುವವರ ಪ್ರಮಾಣ ಹೆಚ್ಚುತ್ತಲಿದೆ.

ADVERTISEMENT

‘ವರ್ಷದ ಹಿಂದೆ ಬ್ಯಾಂಕ್‌ ಒಂದರಲ್ಲಿ ಚಿನ್ನ ಗಿರವಿ ಇಟ್ಟು ₹3 ಲಕ್ಷ ಸಾಲ ಪಡೆದಿದ್ದೆ. ಅದಕ್ಕೆ ಶೇ 9ರ ಬಡ್ಡಿಯಂತೆ ವರ್ಷಕ್ಕೆ ₹27 ಸಾವಿರ ಬಡ್ಡಿ ಆಗಿದ್ದು, ಆ ಹಣವನ್ನು ಮಾತ್ರ ತೆಗೆದುಕೊಂಡು ಸಾಲ ನವೀಕರಿಸಿಕೊಳ್ಳಲು ಹೋಗಿದ್ದೆ. ಆದರೆ ಬ್ಯಾಂಕಿನವರು ಬಡ್ಡಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದು, ಅಸಲನ್ನೂ ಪಾವತಿಸುವಂತೆ ಹೇಳಿದರು. ಅನಿವಾರ್ಯವಾಗಿ ಖಾಸಗಿಯವರಲ್ಲಿ ತಿಂಗಳಿಗೆ ಶೇ 3ರ ಬಡ್ಡಿಯಂತೆ ₹3 ಲಕ್ಷ ಸಾಲ ಪಡೆದು ಬ್ಯಾಂಕ್‌ಗೆ ಕಟ್ಟಿ, ಪುನಃ ಬ್ಯಾಂಕಿನಿಂದ ₹3 ಲಕ್ಷ ಹೊಸ ಸಾಲ ಪಡೆದು, ತಿಂಗಳ ಬಡ್ಡಿ ಸಮೇತ ಸಾಲ ಕೊಟ್ಟವರಿಗೆ ತಲುಪಿಸಿದೆ’ ಎಂದು ಮೈಸೂರಿನ ಯರಗನಹಳ್ಳಿ ನಿವಾಸಿ ರಾಘವೇಂದ್ರ ಬೇಸರಿಸಿದರು.

‘ಆರ್‌ಟಿಸಿ ಇರುವವರಿಗೆ ಒಂದಿಷ್ಟು ವಿನಾಯಿತಿ ಇರುವುದರಿಂದ, ರೈತರೂ ಕೃಷಿಗಾಗಿ ಚಿನ್ನದ ಸಾಲ ಪಡೆದಿದ್ದಾರೆ. ಅವರಿಗೆ ಈ ಮೊದಲಿನಂತೆ ಬಡ್ಡಿ ಕಟ್ಟಿಸಿಕೊಂಡು ಸಾಲ ನವೀಕರಿಸಿಕೊಳ್ಳಬೇಕು. ಇಲ್ಲವಾದರೆ ಮತ್ತೆ ಮೀಟರ್‌ ಬಡ್ಡಿ ದಂಧೆಗೆ ಬಲಿಯಾಗುವ ಸಾಧ್ಯತೆ ಇದೆ’ ಎಂದು ರೈತ ಮುಖಂಡ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

ಪಾಲನೆ ಅನಿವಾರ್ಯ

‘ವಾಯಿದೆ ಮುಗಿದ ಬಳಿಕ ಅಸಲು–ಬಡ್ಡಿ ಪೂರ್ಣ ಪಾವತಿಸಬೇಕು ಎಂಬ ನಿಯಮ ಮೊದಲಿನಿಂದಲೂ ಇದೆ. ಆದರೆ ಕೆಲವು ಬ್ಯಾಂಕ್ ಅಧಿಕಾರಿಗಳು ಸಹಾನುಭೂತಿಯಿಂದ ಕೇವಲ ಬಡ್ಡಿ ಕಟ್ಟಿಸಿಕೊಂಡು ಸಾಲ ನವೀಕರಿಸಿಕೊಳ್ಳುತ್ತಿದ್ದರು. ಸಾಲ ನೀಡಿಕೆಯು ಪಾರದರ್ಶಕ ಹಾಗೂ ವ್ಯವಸ್ಥಿತವಾಗಿರಲಿ ಎನ್ನುವ ಕಾರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈಚೆಗೆ ಸುತ್ತೋಲೆ ಹೊರಡಿಸಿದೆ. ಅದನ್ನು ಬ್ಯಾಂಕುಗಳು ಪಾಲಿಸುವುದು ಅನಿವಾರ್ಯ’ ಎಂದು ಜಿಲ್ಲಾ ಲೀಡ್‌ ಬ್ಯಾಂಕ್ ಅಧಿಕಾರಿ ನಾಗೇಶ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.