ನವದೆಹಲಿ: ವಿತ್ತೀಯ ಕೊರತೆ ಗುರಿ ತಲುಪಲು, ಕೇಂದ್ರ ಸರ್ಕಾರವು ಆರ್ಬಿಐನಿಂದ ಮಧ್ಯಂತರ ಲಾಭಾಂಶದ ರೂಪದಲ್ಲಿ ₹ 30 ಸಾವಿರ ಕೋಟಿ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವರಮಾನ ಸಂಗ್ರಹ ಇಳಿಮುಖವಾಗಿದೆ. ಆರ್ಥಿಕ ಬೆಳವಣಿಗೆ ದರವು ಮೊದಲ ತ್ರೈಮಾಸಿಕದಲ್ಲಿ ಶೇ 5ಕ್ಕೆ ಕುಸಿದಿದೆ. ಹೀಗಾಗಿ ಆರ್ಥಿಕತೆಗೆ ಚೇತರಿಕೆ ನೀಡಲು ಹಲವು ಸುಧಾರಣಾ ಕ್ರಮಗಳನ್ನು ಘೋಷಿಸುತ್ತಿದೆ. ಆದರೆ, ಇದಕ್ಕೆ ಅಗತ್ಯವಾದ ಬಂಡವಾಳ ಹೊಂದಿಸಿಕೊಳ್ಳುವುದು ಸಹ ಸವಾಲಾಗಿದೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3ರಲ್ಲಿ ನಿಯಂತ್ರಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಆರ್ಬಿಐನಿಂದ ₹ 25 ಸಾವಿರ ಕೋಟಿಯಿಂದ ₹ 30 ಸಾವಿರ ಕೋಟಿಯನ್ನು ಮಧ್ಯಂತರ ಲಾಭಾಂಶ ನೀಡುವಂತೆ ಕೇಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಬಿಐನಿಂದ ಲಾಭಾಂಶ ಪಡೆಯುವ ಮಾರ್ಗವಲ್ಲದೆ, ಕೇಂದ್ರೋದ್ಯಮಗಳ ಷೇರು ವಿಕ್ರಯ, ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗಳ (ಎನ್ಎಸ್ಎಸ್ಎಫ್) ಗರಿಷ್ಠ ಬಳಕೆಮಾಡುವ ಮೂಲಕವೂ ಬಂಡವಾಳ ಸಂಗ್ರಹಿಸಬಹುದಾಗಿದೆ.
ಹೆಚ್ಚುವರಿ ಮೀಸಲು ನಿಧಿಯಲ್ಲಿ
₹ 1.76 ಲಕ್ಷ ಕೋಟಿಯನ್ನು ಸರ್ಕಾರಕ್ಕೆ ವರ್ಗಾಯಿಸಲುಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಆರ್ಬಿಐ ಆಡಳಿತ ಮಂಡಳಿ ಕಳೆದ ತಿಂಗಳು ಒಪ್ಪಿಗೆ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.