ADVERTISEMENT

ಲಾಭ ವರ್ಗಾಯಿಸದ ಸಂಸ್ಥೆಗೆ ದಂಡ

ಜಿಎಸ್‌ಟಿ ಮಂಡಳಿಯ 35ನೆ ಸಭೆಯಲ್ಲಿ ಕೈಗೊಂಡ ನಿರ್ಧಾರ

ಪಿಟಿಐ
Published 21 ಜೂನ್ 2019, 19:45 IST
Last Updated 21 ಜೂನ್ 2019, 19:45 IST
ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಭೆಯಲ್ಲಿ ಭಾಗವಹಿಸಿದ್ದರು – ಪಿಟಿಐ ಚಿತ್ರ
ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಭೆಯಲ್ಲಿ ಭಾಗವಹಿಸಿದ್ದರು – ಪಿಟಿಐ ಚಿತ್ರ   

ನವದೆಹಲಿ: ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಸಂಸ್ಥೆಗಳಿಗೆ ಶೇ 10ರಷ್ಟು ದಂಡ ವಿಧಿಸುವುದಕ್ಕೆ ಜಿಎಸ್‌ಟಿ ಮಂಡಳಿಯು ಅನುಮೋದನೆ ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಂಡಳಿ ಸಭೆಯು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಸದ್ಯಕ್ಕೆ ಲಾಭ ವರ್ಗಾಯಿಸದ ಸಂಸ್ಥೆಗಳಿಗೆ ಗರಿಷ್ಠ ₹ 25 ಸಾವಿರ ದಂಡ ವಿಧಿಸಲು ಅವಕಾಶ ಇದೆ. ದಂಡದ ಮೊತ್ತವನ್ನು ಈಗ ಸಂಸ್ಥೆ ಗಳಿಸಿದ ಲಾಭದ ಶೇ 10ರಷ್ಟಕ್ಕೆ ಹೆಚ್ಚಿಸಲಾಗಿದೆ.

ADVERTISEMENT

ಗಡುವು ವಿಸ್ತರಣೆ:ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ವಾರ್ಷಿಕ ರಿಟರ್ನ್‌ ಸಲ್ಲಿಕೆಯ ಗಡುವನ್ನು ಎರಡು ತಿಂಗಳವರೆಗೆ (ಆಗಸ್ಟ್‌ 30ರವರೆಗೆ) ವಿಸ್ತರಿಸಲಾಗಿದೆ.

ಹೊಸ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆಯ ವ್ಯವಸ್ಥೆಯು 2020ರ ಜನವರಿ 1 ರಿಂದ ಜಾರಿಗೆ ಬರಲಿದೆ.

ಅವಧಿ ವಿಸ್ತರಣೆ: ಲಾಭಕೋರತನ ತಡೆ ಪ್ರಾಧಿಕಾರದ (ಎನ್‌ಎಎ) ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ.

ವಹಿವಾಟುದಾರರು ಜಿಎಸ್‌ಟಿ ಜಾಲದ ನೋಂದಣಿ ಪಡೆಯಲು ಆಧಾರ್‌ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಎಲೆಕ್ಟ್ರಾನಿಕ್‌ ಇನ್‌ವಾಯ್ಸ್‌ ವ್ಯವಸ್ಥೆಯನ್ನು 2020ರ ಜನವರಿ 1ರಿಂದ ಪ್ರಾಯೋಗಿಕ ನೆಲೆಯಲ್ಲಿ ಜಾರಿಗೆ ತರಲು ಮಂಡಳಿಯು ಸಮ್ಮತಿಸಿದೆ.

ಜಿಎಸ್‌ಟಿ ನೋಂದಾಯಿತ ಮಲ್ಟಿಪ್ಲೆಕ್ಸ್‌ಗಳು ಇ–ಟಿಕೆಟ್‌ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.

ವಿದ್ಯುತ್‌ ಚಾಲಿತ ವಾಹನಗಳ ಮೇಲಿನ ತೆರಿಗೆಯನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಲು, ಎಲೆಕ್ಟ್ರಿಕ್‌ ಚಾರ್ಜರ್‌ಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸುವ ಪ್ರಸ್ತಾವ ಪರಿಶೀಲಿಸಿ ಶಿಫಾರಸು ನೀಡಲು ಸಮಿತಿಯ ಪರಿಶೀಲನೆಗೆ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.