ADVERTISEMENT

ಆರೋಗ್ಯಸೇವೆ: ಜನರಿಗೆ ವಾರ್ಷಿಕ ₹ 50 ಸಾವಿರ ಕೋಟಿ ಉಳಿತಾಯ

ಪಿಟಿಐ
Published 7 ಮಾರ್ಚ್ 2021, 15:11 IST
Last Updated 7 ಮಾರ್ಚ್ 2021, 15:11 IST

ನವದೆಹಲಿ: ಔಷಧಿಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗಿಸಿದ್ದು, ಕೆಲವು ವೈದ್ಯಕೀಯ ಉಪಕರಣಗಳ ಬೆಲೆ ಕಡಿಮೆ ಮಾಡಿದ್ದು ಸೇರಿದಂತೆ ಆರೋಗ್ಯಸೇವಾ ಕ್ಷೇತ್ರದಲ್ಲಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮವಾಗಿ, ಬಡವರಿಗೆ ವಾರ್ಷಿಕವಾಗಿ ಒಟ್ಟು ₹ 50 ಸಾವಿರ ಕೋಟಿಯಷ್ಟು ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

7,500ನೆಯ ಜನೌಷಧಿ ಕೇಂದ್ರವನ್ನು ಶಿಲ್ಲಾಂಗ್‌ನಲ್ಲಿ ಉದ್ಘಾಟಿಸಿ ಮಾತನಾಡಿದ ಮೋದಿ ಅವರು, ‘ಇಂತಹ ಕೇಂದ್ರಗಳನ್ನು ನಡೆಸುವವರು ಹಾಗೂ ಇದರ ಪ್ರಯೋಜನ ಪಡೆದವರ ಜೊತೆ ನಡೆಸಿದ ಮಾತುಕತೆಗಳ ಮೂಲಕ ನಾನು, ಈ ಯೋಜನೆಯು ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ನೆರವು ನೀಡಿದೆ ಎಂಬುದನ್ನು ಸ್ಪಷ್ಟವಾಗಿ ಕಂಡುಕೊಂಡಿರುವೆ’ ಎಂದರು.

‘ಆಯುಷ್ಮಾನ್‌ ಭಾರತ ಯೋಜನೆಯು 50 ಕೋಟಿ ಜನರಿಗೆ ₹ 5 ಲಕ್ಷದವರೆಗಿನ ಚಿಕಿತ್ಸೆ ಪಡೆಯಲು ನೆರವಾಗುತ್ತಿದೆ. 1.5 ಕೋಟಿಗಿಂತ ಹೆಚ್ಚು ಜನ ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯು ಜನರಿಗೆ ₹ 30 ಸಾವಿರ ಕೋಟಿ ಉಳಿತಾಯ ಮಾಡಲು ನೆರವಾಗಿದೆ ಎಂಬ ಅಂದಾಜು ಇದೆ’ ಎಂದು ಪ್ರಧಾನಿ ಹೇಳಿದರು.

ADVERTISEMENT

ಜನೌಷಧಿ, ಆಯುಷ್ಮಾನ್‌ ಭಾರತ ಯೋಜನೆಗಳು ಮತ್ತು ವೈದ್ಯಕೀಯ ಉಪಕರಣಗಳ ಬೆಲೆಯಲ್ಲಿ ಆಗಿರುವ ಇಳಿಕೆಯ ಪ್ರಯೋಜನಗಳ ಮೊತ್ತವನ್ನು ಒಟ್ಟುಗೂಡಿಸಿದರೆ, ಬಡವರು ಮತ್ತು ಮಧ್ಯಮ ವರ್ಗದ ಜನ ಪ್ರತಿ ವರ್ಷ ₹ 50 ಸಾವಿರ ಕೋಟಿ ಉಳಿತಾಯ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.