ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಇಳಿಕೆಯಾಗಿದ್ದು, ಗ್ರಾಹಕರು ನಿರಾಳರಾಗಿದ್ದಾರೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಬೆಳ್ಳುಳ್ಳಿ ಚಿಲ್ಲರೆ ದರವು ಕೆ.ಜಿಗೆ ₹500 ದಾಟಿತ್ತು. ಇದರಿಂದ ಗ್ರಾಹಕರ ಜೇಬಿಗೆ ಹೊರೆಯಾಗಿತ್ತು. ಸದ್ಯ ಇಲ್ಲಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಗಟು ದರ ಕೆ.ಜಿಗೆ ₹50ರಿಂದ ₹100 ಇದ್ದರೆ, ಚಿಲ್ಲರೆ ದರವು ಕೆ.ಜಿಗೆ ₹120ರಿಂದ ₹140 ಇದೆ.
ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆ ಪೈಕಿ ಮಧ್ಯಪ್ರದೇಶದಲ್ಲಿ ಶೇ 70ರಷ್ಟು ಉತ್ಪಾದನೆಯಾಗುತ್ತದೆ. ಉಳಿದಂತೆ ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ರೈತರು ಹೆಚ್ಚಾಗಿ ಬೆಳೆಯುತ್ತಾರೆ.
ಕಳೆದ ವರ್ಷ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಳೆಯಿಂದಾಗಿ ಬೆಳೆ ಹಾನಿಗೀಡಾಗಿತ್ತು. ಈ ಬಾರಿ ಅಲ್ಲಿ ಉತ್ಪಾದನೆ ಹೆಚ್ಚಿದೆ. ಇದರಿಂದ ಕರ್ನಾಟಕದ ಮಾರುಕಟ್ಟೆಗೆ ಆವಕ ಹೆಚ್ಚಾಗುತ್ತಿದೆ. ಹಾಗಾಗಿ, ಬೆಳ್ಳುಳ್ಳಿ ದರ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಸದ್ಯ ಮಧ್ಯಪ್ರದೇಶದಲ್ಲಿ ಕೊಯ್ಲು ಶುರುವಾಗಿದೆ. ಅಲ್ಲಿಂದ ಬೆಂಗಳೂರಿನ ಯಶವಂತಪುರದ ಎಪಿಎಂಸಿಗೆ ಪ್ರತಿದಿನ 8 ಸಾವಿರದಿಂದ 10 ಸಾವಿರ ಚೀಲ (ಪ್ರತಿ ಚೀಲ 50 ಕೆ.ಜಿ) ಬೆಳ್ಳುಳ್ಳಿ ಆವಕವಾಗುತ್ತದೆ. ಇಲ್ಲಿಂದ ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೂ ಪೂರೈಕೆಯಾಗುತ್ತದೆ. ಅಲ್ಲದೆ, ನೆರೆಯ ತಮಿಳುನಾಡಿಗೂ ರವಾನೆಯಾಗುತ್ತದೆ.
‘ಕಳೆದ ವರ್ಷ ರಾಜಸ್ಥಾನದಲ್ಲಿ ಮಳೆಯಿಂದಾಗಿ ಹೆಚ್ಚು ಬೆಳೆ ನಷ್ಟವಾಗಿತ್ತು. ಈ ಬಾರಿ ಅಲ್ಲಿನ ಸರ್ಕಾರ ಅಂದಾಜಿಸಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಉತ್ಪಾದನೆಯಾಗಿದೆ. ಸದ್ಯ ಮಧ್ಯಪ್ರದೇಶದಿಂದ ಅತಿಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರಿನ ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕವಾಗುತ್ತಿದೆ. ಇದರಿಂದ ಬೆಲೆ ಇಳಿಕೆಯಾಗಿದೆ’ ಎಂದು ಗುಜರಾತ್ ಟ್ರೇಡರ್ಸ್ನ ವರ್ತಕ ಜುಬೇರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಳ್ಳುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಈ ಬಾರಿ ಉತ್ಪಾದನೆ ಹೆಚ್ಚಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ. ಹಾಗಾಗಿ, ಸಗಟು ಮತ್ತು ಚಿಲ್ಲರೆ ಬೆಲೆಯು ಸ್ಥಿರವಾಗಿರಲಿದೆ’ ಎಂದು ಹೇಳಿದರು.
ಬಾಂಗ್ಲಾಕ್ಕೆ ರಫ್ತು ಶುರು
ಭಾರತದಲ್ಲಿ ಬೆಳೆಯುವ ಬೆಳ್ಳುಳ್ಳಿಯು ಬಾಂಗ್ಲಾದೇಶ ಮಲೇಷ್ಯಾ ವಿಯೆಟ್ನಾಂ ಹಾಗೂ ಶ್ರೀಲಂಕಾಕ್ಕೂ ರಫ್ತಾಗುತ್ತದೆ. ಪ್ರಸ್ತುತ ಮಧ್ಯಪ್ರದೇಶದಿಂದ ಬಾಂಗ್ಲಾಕ್ಕೆ ರಫ್ತು ಆರಂಭಗೊಂಡಿದೆ. ಉತ್ಪಾದನೆ ಹೆಚ್ಚಿರುವುದರಿಂದ ಇದು ದೇಶೀಯ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.