ADVERTISEMENT

ಗೋಧಿ ಬಂಪರ್‌ ಉತ್ಪಾದನೆ ನಿರೀಕ್ಷೆ: ವರ್ತಕರ ದಾಸ್ತಾನು ಮಿತಿ ತಗ್ಗಿಸಿದ ಕೇಂದ್ರ

ಪಿಟಿಐ
Published 21 ಫೆಬ್ರುವರಿ 2025, 12:33 IST
Last Updated 21 ಫೆಬ್ರುವರಿ 2025, 12:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ಹಿಂಗಾರು ಅವಧಿಯಲ್ಲಿ ಬಿತ್ತನೆಯಾಗಿರುವ ಗೋಧಿ ಫಸಲು ಸಮೃದ್ಧವಾಗಿದೆ. ಹಾಗಾಗಿ, ಈ ಬಾರಿ ಬಂ‍ಪರ್‌ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2023–24ನೇ ಮಾರುಕಟ್ಟೆ ವರ್ಷದಲ್ಲಿ (ಜುಲೈನಿಂದ ಜೂನ್‌) 1,132.92 ಲಕ್ಷ ಟನ್ಗೋ ಧಿ ಉತ್ಪಾದನೆಯಾಗಿತ್ತು. ಹವಾಮಾನ ಕೂಡ ಬೆಳೆಗೆ ಪೂರಕವಾಗಿದೆ. ಹಾಗಾಗಿ, 2024–25ನೇ ಮಾರುಕಟ್ಟೆ ವರ್ಷದಲ್ಲಿ ಹೆಚ್ಚಿನ ಉತ್ಪಾದನೆಯಾಗುವ ನಿರೀಕ್ಷೆಯಿದೆ’ ಎಂದರು.

ಕಳೆದ ವರ್ಷದ ಹಿಂಗಾರು ಅವಧಿಯಲ್ಲಿ 315.63 ಲಕ್ಷ ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆಯಾಗಿತ್ತು. ಈ ಬಾರಿ 320 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ADVERTISEMENT

ಬೆಲೆ ನಿಯಂತ್ರಣಕ್ಕೆ ಕ್ರಮ:

ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಗೋಧಿ ದಾಸ್ತಾನಿಗೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಸಗಟುದಾರರು, ಚಿಲ್ಲರೆ ಮಾರಾಟಗಾರರು ಮತ್ತು ಸಂಸ್ಕರಣಾಗಾರರ ದಾಸ್ತಾನು ಮಿತಿಗೆ ನಿಯಮಾವಳಿ ರೂಪಿಸಿದೆ.

ದಾಸ್ತಾನಿಗೆ ಬಗ್ಗೆ ನಿಗಾವಹಿಸಲಾಗಿದೆ. ಕೃತಕ ಅಭಾವ ಸೃಷ್ಟಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದರೆ ಸರ್ಕಾರವು ಮಧ್ಯಪ್ರವೇಶಿಸಲಿದೆ ಎಂದು ಹೇಳಿದೆ.

ವರ್ತಕರು, ಸಗಟುದಾರರಿಗೆ ಈ ಮೊದಲು 1 ಸಾವಿರ ಟನ್‌ನಷ್ಟು ಗೋಧಿ ದಾಸ್ತಾನಿಗೆ ಅವಕಾಶ ಕಲ್ಪಿಸಲಾಗಿತ್ತು. ಸದ್ಯ ಇದನ್ನು 250 ಟನ್‌ಗೆ ಮಿತಿಗೊಳಿಸಿದೆ. ಚಿಲ್ಲರೆ ಮಾರಾಟಗಾರರ ಮಿತಿಯನ್ನು 5 ಟನ್‌ನಿಂದ 4 ಟನ್‌ಗೆ ಕಡಿತಗೊಳಿಸಿದೆ. ಈ ‍ಪರಿಷ್ಕೃತ ದಾಸ್ತಾನು ಮಿತಿ ಆದೇಶವು ಮಾರ್ಚ್ 31ರ ವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದೆ.

ಸಂಸ್ಕರಣಾಗಾರರು ಮಾಸಿಕ ಸಂಸ್ಕರಣಾ ಸಾಮರ್ಥ್ಯದ ಶೇ 50ರಷ್ಟು ಗೋಧಿಯನ್ನಷ್ಟೇ ದಾಸ್ತಾನಿಟ್ಟುಕೊಳ್ಳಲು ಅವಕಾಶವಿದೆ. ಏಪ್ರಿಲ್‌ವರೆಗೆ ಪರಿಷ್ಕೃತ ಆದೇಶ ಜಾರಿಯಲ್ಲಿ ಇರಲಿದೆ. ಪ್ರತಿ ಶುಕ್ರವಾರವು ಇಲಾಖೆಯ ಪೋರ್ಟಲ್‌ನಲ್ಲಿ ದಾಸ್ತಾನು ವಿವರವನ್ನು ನಮೂದಿಸಬೇಕಿದೆ ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.