ಮಂಗಳೂರು: ಜೂನ್ ತ್ರೈಮಾಸಿಕದಲ್ಲಿ ಕರ್ಣಾಟಕ ಬ್ಯಾಂಕ್ ₹292.40 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹400.33 ಕೋಟಿ ನಿವ್ವಳ ಲಾಭ ದಾಖಲಿಸಿತ್ತು.
ಮಂಗಳೂರಿನಲ್ಲಿರುವ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಮೊದಲ ತ್ರೈಮಾಸಿಕದ ಲೆಕ್ಕಪತ್ರ ಅಂಗೀಕರಿಸಲಾಯಿತು.
ಈ ಅವಧಿಯಲ್ಲಿ ಬ್ಯಾಂಕ್ನ ಒಟ್ಟು ವಹಿವಾಟು ಶೇ 1.12ರಷ್ಟು ಏರಿಕೆಯಾಗಿ ₹1,77,509.19 ಕೋಟಿಗೆ ತಲುಪಿದೆ (ಕಳೆದ ವರ್ಷ 1,75,534.89 ಕೋಟಿ). ಠೇವಣಿಯಲ್ಲೂ ಶೇ 3.16ರಷ್ಟು ಏರಿಕೆಯಾಗಿ ₹1,03,242.17ಗೆ ತಲುಪಿದೆ (ಕಳೆದ ವರ್ಷ 1,00,079.88 ಕೋಟಿ). ಕಳೆದ ವರ್ಷದ ಮೊದಲ
ತ್ರೈಮಾಸಿಕದಲ್ಲಿ ಬ್ಯಾಂಕ್ ₹75,455.01 ಕೋಟಿ ಮುಂಗಡ ನೀಡಿದ್ದರೆ, ಈ ಬಾರಿ ಅದರ ಪ್ರಮಾಣ ₹74,267.02 ಕೋಟಿಗೆ ತಗ್ಗಿದೆ.
ಬ್ಯಾಂಕ್ನ ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣ ಇಳಿಕೆಯಾಗುತ್ತಿದ್ದು, ಶೇ 1.44 ಕ್ಕೆ ತಲುಪಿದೆ. ಕಳೆದ ವರ್ಷ ಇದು ಶೇ 1.66ರಷ್ಟಿತ್ತು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
‘ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಮಾಡಿರುವ ಹೂಡಿಕೆಯ ಪರಿಣಾಮಗಳು ಮುಂದಿನ ತ್ರೈಮಾಸಿಕಗಳಲ್ಲಿ ಕಾಣಿಸಲಿವೆ. ಚಿಲ್ಲರೆ, ಕೃಷಿ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರ ಹಾಗೂ ಕಡಿಮೆ ವೆಚ್ಚದ ಠೇವಣಿಗಳ ಮೇಲೆ ನಮ್ಮ ಹೆಚ್ಚಿನ ಗಮನ ಇರುತ್ತದೆ. ನಮ್ಮ ಬೆಳವಣಿಗೆಯ ಹಾದಿ ನಿರಂತರವಾಗಿರುತ್ತದೆ ಮತ್ತು ಎಲ್ಲಾ ಪಾಲುದಾರರಿಗೆ ನಾವು ಬದ್ಧರಾಗಿದ್ದೇವೆ’ ಎಂದು ಬ್ಯಾಂಕ್ನ ಎಂ.ಡಿ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್
ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.