
ಬೆಂಗಳೂರು: ಮೆಕ್ಕೆಜೋಳವನ್ನು ಕಡ್ಡಾಯವಾಗಿ ಖರೀದಿ ಮಾಡುವಂತೆ ಡಿಸ್ಟಿಲರಿಗಳಿಗೆ ಆದೇಶ ಹೊರಡಿಸಿರುವ ಸರ್ಕಾರ ಡಿ.1ರಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ರೈತರಿಂದ ಮೆಕ್ಕೆಜೋಳ ಖರೀದಿಸಲು ಉತ್ತರ ಕರ್ನಾಟಕದ ಮೂರು ಜಿಲ್ಲೆಗಳ 5 ಡಿಸ್ಟಿಲರಿಗಳ ಹೆಸರು, ಖರೀದಿ ಮಾಡಬೇಕಾದ ಪ್ರಮಾಣವನ್ನೂ ನಿಗದಿ ಮಾಡಲಾಗಿದೆ.
‘ಧಾನ್ಯ ಆಧಾರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಮೊದಲ ತ್ರೈಮಾಸಿಕದಲ್ಲಿ ಅಂದರೆ 2026ರ ಜ.26ರವರೆಗೆ 44,892 ಮೆಟ್ರಿಕ್ ಟನ್ ಮೆಕ್ಕೆಜೋಳ ಅಗತ್ಯವಿದೆ. ಇದರಲ್ಲಿ ಶೇ 50ರಷ್ಟು 22,446 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಲ್ಲವೇ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘಗಳ ಮೂಲಕ ಖರೀದಿಸಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಡಿಸ್ಟಿಲರಿಗಳ ಗೋದಾಮುಗಳಿಗೆ ಸರಬರಾಜು ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೆಕ್ಕೆಜೋಳ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದರು. ಮೆಕ್ಕೆಜೋಳಕ್ಕೆ ಹೆಚ್ಚುವರಿ ಬೆಲೆ ಘೋಷಿಸಿ, ಖರೀದಿ ಮಾಡಬೇಕೆಂದು ಹೋರಾಟವನ್ನೂ ನಡೆಸಿದ್ದರು. ಈ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಸಭೆ ನಡೆಸಿದ್ದರು. ಸಭೆಯ ತೀರ್ಮಾನದಂತೆ, ಸಹಕಾರ ಇಲಾಖೆಯು ಖರೀದಿ ಪ್ರಕ್ರಿಯೆ, ನಿಗದಿತ ಡಿಸ್ಟಿಲರಿಗಳು, ಖರೀದಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಪ್ರಮಾಣಿತ ಕಾರ್ಯ ವಿಧಾನ (ಎಸ್ಒಪಿ) ಕುರಿತ ಆದೇಶ ಹೊರಡಿಸಿದೆ.
‘ಸೋಮವಾರದಿಂದಲೇ ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಮೂರು ದಿನದ ಬಳಿಕ ನೋಂದಣಿ ಜತೆಗೆ ಖರೀದಿ ಎರಡೂ ಪ್ರಕ್ರಿಯೆಗಳು ಮುಂದುವರಿಯಲಿವೆ. ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ ಜಿಲ್ಲಾಧಿಕಾರಿ, ಸಹಕಾರ ಇಲಾಖೆಯ ಜಿಲ್ಲಾ ನಿಬಂಧಕರು ಖರೀದಿ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸುವಂತೆ ಸೂಚಿಸಲಾಗಿದೆ’ ಎಂದು ಸಹಕಾರ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ.
ಖರೀದಿ ಪ್ರಕ್ರಿಯೆಗೆ ಎನ್ಇಎಂಎಲ್ ಸಂಸ್ಥೆ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಫ್ರೂಟ್ಸ್ ಪೋರ್ಟಲ್ ಮತ್ತು ನೇರ ನಗದು ವರ್ಗಾವಣೆ (ಡಿಬಿಟಿ) ಸಂಯೋಜನೆಯೊಂದಿಗೆ ಡಿ.1ರಿಂದ ಮೂರು ದಿನಗಳವರೆಗೆ ರೈತರ ನೋಂದಣಿ ನಡೆಸಬೇಕು.
ಮೂರು ದಿನಗಳ ನಂತರದಲ್ಲಿ ರೈತರ ನೋಂದಣಿ ಹಾಗೂ ಖರೀದಿ ಎರಡೂ ಪ್ರಕ್ರಿಯೆ ಏಕಕಾಲದಲ್ಲಿ ನಿರ್ವಹಿಸಬೇಕು.
ಪ್ರತಿ ರೈತರಿಂದ ಗರಿಷ್ಠ 5 ಕ್ವಿಂಟಲ್ ಮೆಕ್ಕೆಜೋಳ ವನ್ನು ಪ್ರತಿ ಕ್ವಿಂಟಲ್ಗೆ ಬೆಂಬಲ ಬೆಲೆ ದರವಾದ ₹2,400ರಂತೆ ಖರೀದಿಸಬೇಕು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಡಿಸ್ಟಿಲರಿಗಳಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ನೇರವಾಗಿ ಖಾತೆಗೆ ಖರೀದಿ ಹಣ ಪಾವತಿಸಬೇಕು.
ಧಾನ್ಯ ಹಾಗೂ ಕಾಕಂಬಿ ಆಧಾರಿತ ಡಿಸ್ಟಿಲರಿಗಳು ಬೇಡಿಕೆ ಸಲ್ಲಿಸಿದರೆ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಮಹಾಮಂಡಳ ಮುಂದುವರಿಸಬೇಕು.
ಖರೀದಿ ಪ್ರಕ್ರಿಯೆಗೆ ತಗಲುವ ವೆಚ್ಚ, ಎನ್ಇಎಂಎಲ್ ಸಂಸ್ಥೆಯ ಸೇವಾ ವೆಚ್ಚ ಹಾಗೂ ಇತರ ವೆಚ್ಚಗಳನ್ನು ಮಹಾಮಂಡಳಕ್ಕೆ ರಾಜ್ಯ ಸರ್ಕಾರದಿಂದ
ಒದಗಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.