ಬಳ್ಳಾರಿ: ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್ಪಿ) ಹಿಂಗಾರು ಜೋಳ ನೋಂದಣಿಗೆ ರಾಜ್ಯದಲ್ಲಿ 2 ದಿನಗಳಿಂದ ಎದುರಾಗಿದ್ದ ಸರ್ವರ್ ಕಾಟ ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಿವಾರಣೆಯಾಯಿತು. ಆದರೆ, ರಾಜ್ಯಕ್ಕೆ ನಿಗದಿಯಾಗಿದ್ದ ಕೋಟಾ ಮುಗಿದಿದ್ದರಿಂದ ನೋಂದಣಿ ಸ್ಥಗಿತಗೊಂಡಿದೆ. ರೈತರು ಕಂಗಾಲಾಗಿದ್ದಾರೆ.
ರಾಜ್ಯದಾದ್ಯಂತ 10 ಲಕ್ಷ ಕ್ವಿಂಟಲ್ ಜೋಳ ಖರೀದಿಸುವುದಾಗಿ ಸರ್ಕಾರ ಹೇಳಿತ್ತಾದರೂ, ಖರೀದಿಯಲ್ಲಿ ಜಿಲ್ಲೆಗಳಿಗೆ ಮಿತಿ ವಿಧಿಸಿತ್ತು. ಇದರ ವಿರುದ್ಧ ರೈತರು ಹೋರಾಟ ನಡೆಸಿ, ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ ಜಿಲ್ಲೆಗಳ ಮಿತಿ ತೆರವು ಮಾಡಿಸಿಕೊಂಡು ಬಂದಿದ್ದರು.
ಸರ್ಕಾರ ಏ. 22ರಂದು ಮಿತಿ ತೆರುವುಗೊಳಿಸಿತ್ತು. 24ರ ಗುರುವಾರ ದಿಂದ ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳೂ ಸೇರಿ ರಾಜ್ಯ ದಾದ್ಯಂತ ನೋಂದಣಿ ಆರಂಭವಾಗಿತ್ತು. ಆದರೆ, 25ರ ಸಂಜೆ ಹೊತ್ತಿಗೆ ಸರ್ವರ್ನಲ್ಲಿ ಸಮಸ್ಯೆ ಕಾಣಿಸಿಕೊಂಡು, ನೋಂದಣಿ ಸ್ಥಗಿತಗೊಂಡಿತ್ತು. ಅಷ್ಟು ಹೊತ್ತಿಗಾಗಲೇ ರಾಜ್ಯದಾದ್ಯಂತ 9.40 ಲಕ್ಷ ಕ್ವಿಂಟಲ್ನಷ್ಟು ನೋಂದಣಿ ಪೂರ್ಣ ಗೊಂಡಿತ್ತು. 60 ಸಾವಿರ ಕ್ವಿಂಟಾಲ್ ಖರೀದಿಗೆ ಮಾತ್ರ ಅವಕಾಶವಿತ್ತು.
ಜೋಳ ನೋಂದಣಿ ಶೀಘ್ರವೇ ಅಂತ್ಯಗೊಳ್ಳುತ್ತದೆ ಎಂಬುದನ್ನು ತಿಳಿದಿದ್ದ ರೈತರು ಶುಕ್ರವಾರ ರಾತ್ರಿಯಿಂದಲೂ ಖರೀದಿ ಕೇಂದ್ರಗಳ ಬಳಿ ಬೀಡು ಬಿಟ್ಟಿದ್ದರು. ಸೋಮವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸರ್ವರ್ ಸಮಸ್ಯೆ ನಿವಾರಣೆಯಾದ ಕೆಲವೇ ನಿಮಿಷಗಳಲ್ಲಿ ರಾಜ್ಯದಾದ್ಯಂತ 60 ಸಾವಿರ ಕ್ವಿಂಟಲ್ ನೋಂದಣಿಯಾಯಿತು. ಕೆಲವೇ ರೈತರಿಗಷ್ಟೇ ನೋಂದಣಿ ಅವಕಾಶ ಸಿಕ್ಕಿತು. ಇನ್ನುಳಿದ ಸಾವಿರಾರು ರೈತರು ಅವಕಾಶ ವಂಚಿತರಾಗಿದ್ದು, ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ನಾವು ಬೆಳೆ ಇಟ್ಟಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿರುತ್ತೇವೆ. ಆದರೆ, ಸರ್ಕಾರ ಹೀಗೆ ಮಿತಿ ವಿಧಿಸಿ ಖರೀದಿ ಮಾಡಿದರೆ ನಮಗೆ ಅನ್ಯಾಯವಾಗುವುದಿಲ್ಲವೇ ಎಂದು ಬಳ್ಳಾರಿ ಹೊರವಲಯದ ಹಲಕುಂದಿಯ ರೈತ ಗಾದೆಪ್ಪ ಎಂಬುವವರು ಪ್ರಶ್ನೆ ಮಾಡಿದ್ದಾರೆ.
ಹೈಬ್ರೀಡ್ ಜೋಳ ಮಾರುಕಟ್ಟೆಯಲ್ಲಿ ₹1500ರಿಂದ ₹1600 ಇದೆ. ಆದರೆ, ಎಂಎಸ್ಪಿ ಅಡಿ ₹3,371 ಸಿಗುತ್ತಿದೆ. ಎಂಎಸ್ಪಿ ಅಡಿ ನೋಂದಣಿ ಮುಗಿದು ಹೋಗಿರುವುದರಿಂದ ಭಾರಿ ನಷ್ಟವಾಗುತ್ತಿದೆ ಎಂಬುದು ರೈತರ ದೂರು.
ಬಳ್ಳಾರಿಯಲ್ಲಿ ಕನಿಷ್ಠ 60 ಸಾವಿರ ಕ್ವಿಂಟಲ್, ರಾಯಚೂರಿನಲ್ಲಿ 2.50 ಲಕ್ಷದಿಂದ 3 ಲಕ್ಷ ಕ್ವಿಂಟಲ್ನಷ್ಟು ನೋಂದಣಿ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಲ್ಲು, ಚಪ್ಪಲಿ ಸಾಲು:
ಇತ್ತ ಖರೀದಿ ಕೇಂದ್ರಗಳಲ್ಲಿ ಬೀಡು ಬಿಟ್ಟಿದ್ದ ರೈತರು, ಅನ್ನ ನೀರಿಲ್ಲದೇ, ಎರಡು ದಿನಗಳಿಂದ ಬಿಸಿಲಿನಲ್ಲಿ ಒಣಗಿದ್ದಾರೆ. ಖರೀದಿ ಕೇಂದ್ರಗಳ ಮುಂದೆ ಕಲ್ಲು, ಜಪ್ಪಲಿ, ಗೋಣಿಚೀಲಗಳನ್ನು ಜೋಡಿಸಿಟ್ಟು ಕಾದಿದ್ದಾರೆ.
ಸಮಸ್ಯೆ ಬಗೆಹರಿದ ಕೂಡಲೇ ನೋಂದಣಿ ಮಾಡಿಸುವ ಧಾವಂತದಲ್ಲಿದ್ದ ರೈತರು ಖರೀದಿ ಕೇಂದ್ರಗಳನ್ನು ಬಿಟ್ಟು ಬೇರೆಡೆಗೆ ಕದಲಿರಲಿಲ್ಲ. 40–42 ಡಿಗ್ರಿ ಉಷ್ಣಾಂಶವಿದ್ದರೂ, ಮರಗಳಡಿ ಆಶ್ರಯಪಡೆದರೇ ಹೊರತು ಜಾಗ ಬಿಟ್ಟಿರಲಿಲ್ಲ. ಈಗ ನೋಂದಣಿಯೇ
ಸ್ಥಗಿತಗೊಂಡಿರುವುದು ರೈತರನ್ನು ತೀವ್ರ ನಿರಾಶೆಗೆ ದೂಡಿದೆ.
ಎರಡು ದಿನಗಳಿಂದ ಖರೀದಿ ಕೇಂದ್ರದದ ಬಳಿ ಕಾದಿದ್ದೆವು. ನೋಂದಣಿ ಆರಂಭವಾದ ಮೂರ್ನಾಲ್ಕು ನಿಮಿಷಗಳಲ್ಲೇ ಮಿತಿ ಮುಗಿದಿದೆ. ಜೋಳ ಬೆಳೆದು ನಷ್ಟವಾಗಿದೆ.ರಾಜೇಶ್, ರೈತ, ಹಲಕುಂದಿ
ಖರೀದಿಯಲ್ಲಿ ರಾಜ್ಯಗಳಿಗೆ ಕೇಂದ್ರ ಮಿತಿ ವಿಧಿಸುತ್ತದೆ. ಮಿತಿ ತೆಗೆಯುವ ನಿರ್ಧಾರ ಕೇಂದ್ರದ್ದು. ಹಾಗೆ ಆದ ಉದಾಹರಣೆ ವಿರಳ. ಆದರೂ ರಾಜ್ಯ ಸರ್ಕಾರಕ್ಕೆ ವರದಿ ನೀಡುತ್ತೇನೆ.ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾಧಿಕಾರಿ, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.