ADVERTISEMENT

‘ಮುದ್ರಣ ಕಾಗದ: ಸುಂಕ ಇಳಿಕೆ ಇಲ್ಲ’

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ಪಿಟಿಐ
Published 23 ಜುಲೈ 2019, 19:39 IST
Last Updated 23 ಜುಲೈ 2019, 19:39 IST
   

ನವದೆಹಲಿ: ‘ಮುದ್ರಣ ಕಾಗದದ ಮೇಲೆ ವಿಧಿಸಿರುವ ಆಮದು ಸುಂಕ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಆಮದು ಮಾಡಿಕೊಳ್ಳುವ ಮುದ್ರಣ ಕಾಗದಕ್ಕೆ ಕೇಂದ್ರ ಬಜೆಟ್‌ನಲ್ಲಿಶೇ 10ರಷ್ಟು ಕಸ್ಟಮ್ಸ್‌ ಸುಂಕ ವಿಧಿಸಲಾಗಿದೆ.

ರಾಜ್ಯಸಭೆಯಲ್ಲಿ 2019ರ ಹಣಕಾಸು ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅವರು ಮಾತನಾಡಿದರು.

ADVERTISEMENT

‘ದೇಶದಲ್ಲಿ ತಯಾರಾಗುತ್ತಿರುವ ಮುದ್ರಣ ಕಾಗದಗಳು ಮಾರಾಟವಾಗುತ್ತಿಲ್ಲ. ಹೀಗಾಗಿ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸುಂಕ ಹೆಚ್ಚಿಸಲಾಗಿದೆ’ ಎಂದುತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

‘ಜಾಹೀರಾತಿನಿಂದ ಬರುವ ವರಮಾನವೂ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿಕಸ್ಟಮ್ಸ್‌ ಸುಂಕ ಹೆಚ್ಚಳದಿಂದ ಸಣ್ಣ ದಿನಪತ್ರಿಕೆಗಳು ಇನ್ನಷ್ಟು ಸಂಕಷ್ಟ ಎದುರಿಸುವಂತಾಗಿದೆ’ ಎಂದುವೈಎಸ್‌ಆರ್‌–ಕಾಂಗ್ರೆಸ್‌ ಸಂಸದ ವಿ. ವಿಜಯಸಾಯಿ ರೆಡ್ಡಿ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ,‘ಬೇಡಿಕೆ ಪೂರೈಸುವಷ್ಟು ತಯಾರಿಸುವ ಸಾಮರ್ಥ್ಯ ದೇಶಿ ತಯಾರಕರಿಗಿದೆ. ಆದರೆ, ಬಹುತೇಕ ಎಲ್ಲವೂ ಆಮದಾಗುತ್ತಿದೆ. ಕೆಲವು ತಿಂಗಳಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಮುದ್ರಣ ಕಾಗದದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಪ್ರತಿ ಟನ್‌ಗೆ 700 ಡಾಲರ್‌ನಿಂದ 500 ಡಾಲರ್‌ಗೆ (₹48,300 ರಿಂದ ₹34,500ಕ್ಕೆ) ಇಳಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ತಯಾರಾಗುತ್ತಿರುವುದನ್ನು ಖರೀದಿಸುವವರೇ ಇಲ್ಲವಾಗಿದ್ದಾರೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.