ನವದೆಹಲಿ: ಕೋವಿಡ್ನಿಂದಾಗಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ನೋಟು ಮುದ್ರಿಸಿ, ಚಲಾವಣೆ ಬಿಡುವ ಆಲೋಚನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ಸೋಮವಾರ ತಿಳಿಸಿದ್ದಾರೆ.
ಸಾಂಕ್ರಾಮಿಕದಿಂದಾಗಿ ಹಾನಿಗೆ ಒಳಗಾಗಿರುವ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು, ಉದ್ಯೋಗ ನಷ್ಟ ತಪ್ಪಿಸಲು ಕೇಂದ್ರ ಸರ್ಕಾರವು ಹೆಚ್ಚು ನೋಟು ಮುದ್ರಿಸಿ ಚಲಾವಣೆಗೆ ಬಿಡಬೇಕು ಎಂದು ಹಲವು ಮಂದಿ ಅರ್ಥಶಾಸ್ತ್ರಜ್ಞರು ಸಲಹೆ ಮಾಡಿದ್ದಾರೆ. ‘ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) 2020–21ರಲ್ಲಿ ಶೇಕಡ (–)7.3ರಷ್ಟು ಕುಸಿತ ಕಂಡಿರುವ ಅಂದಾಜು ಇದೆ’ ಎಂದು ನಿರ್ಮಲಾ ಅವರು ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದ್ದಾರೆ.
‘ಅರ್ಥ ವ್ಯವಸ್ಥೆಯ ಮೂಲ ಅಂಶಗಳು ಗಟ್ಟಿಯಾಗಿವೆ. ಲಾಕ್ಡೌನ್ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಿದ್ದು ಮತ್ತು ಆತ್ಮನಿರ್ಭರ ಭಾರತ ಯೋಜನೆಯ ಮೂಲಕ ನೀಡಿದ ತ್ವರಿತ ಸಹಾಯದ ಕಾರಣದಿಂದಾಗಿ ಅರ್ಥ ವ್ಯವಸ್ಥೆಯು 2020–21ರ ದ್ವಿತೀಯಾರ್ಧದಲ್ಲಿ ಚೇತರಿಕೆಯ ಹಾದಿಗೆ ಮರಳಿದೆ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.