ನವದೆಹಲಿ: ದೇಶದಲ್ಲಿ ಈರುಳ್ಳಿ ದರ ನಿಯಂತ್ರಣಕ್ಕೆ ತರುವ ಸಲುವಾಗಿ ಕೇಂದ್ರ ಸರ್ಕಾರ 1 ಲಕ್ಷ ಟನ್ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಶನಿವಾರ ನಡೆದ ಕಾರ್ಯದರ್ಶಿಗಳ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಚಿಲ್ಲರೆ ಮಾಟ ದರ ಕೆ.ಜಿಗೆ ₹ 100ರ ಸಮೀಪಕ್ಕೆ ತಲುಪಿದೆ. ಬೇರೆ ಪ್ರದೇಶಗಳಲ್ಲಿ ಕೆ.ಜಿಗೆ 60 ರಿಂದ ₹ 80ರಂತೆ ಮಾರಾಟವಾಗುತ್ತಿದೆ. ಹೀಗಾಗಿ ಪೂರೈಕೆ ಹೆಚ್ಚಿಸುವ ಮೂಲಕ ದರ ಏರಿಕೆ ನಿಯಂತ್ರಣಕ್ಕೆ ತರಲು ಮುಂದಾಗಿದೆ.
ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆಯು ಆಮದು ಮಾಡಿಕೊಳ್ಳಲಿದ್ದು, ನಾಫೆಡ್ ಸಂಸ್ಥೆಯು ನವೆಂಬರ್ 15 ರಿಂದ ಡಿಸೆಂಬರ್ 15ರ ಅವಧಿಯಲ್ಲಿ ಪೂರೈಕೆ ಮಾಡಲಿದೆ.
ಮೊದಲ ಹಂತದಲ್ಲಿ 2 ಸಾವಿರ ಟನ್ ಈರುಳ್ಳಿ ಶೀಘ್ರವೇ ಭಾರತದ ಬಂದರುಗಳಿಗೆ ಬರಲಿದೆ. ಎರಡನೇ ಹಂತದ ಸರಕು ಡಿಸೆಂಬರ್ ಅಂತ್ಯದಲ್ಲಿ ಪೂರೈಕೆಯಾಗಲಿದೆ ಎಂದು ಎಂಎಂಟಿಸಿ ತಿಳಿಸಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದಾಗಿ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಬೆಲೆ ಹೆಚ್ಚಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.