ADVERTISEMENT

ಅದಾನಿಗೆ ಧಾರಾವಿ ಅಭಿವೃದ್ಧಿ ಟೆಂಡರ್‌: ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ಅಸ್ತು

ಪಿಟಿಐ
Published 20 ಡಿಸೆಂಬರ್ 2024, 15:20 IST
Last Updated 20 ಡಿಸೆಂಬರ್ 2024, 15:20 IST
ಧಾರಾವಿ ಕೊಳೆಗೇರಿ –ಪಿಟಿಐ ಚಿತ್ರ
ಧಾರಾವಿ ಕೊಳೆಗೇರಿ –ಪಿಟಿಐ ಚಿತ್ರ   

ಮುಂಬೈ: ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಬಗ್ಗೆ ಅದಾನಿ ಸಮೂಹಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ನೀಡಿದ್ದ ಟೆಂಡರ್‌ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್‌ ಅವರಿದ್ದ ವಿಭಾಗೀಯ ನ್ಯಾಯಪೀಠವು, ‘ಟೆಂಡರ್‌ ನೀಡುವಲ್ಲಿ ನಿರಂಕುಶತೆ, ಅಸಮರ್ಪಕತೆ ಅಥವಾ ವಿಕೃತತೆ ಇರುವುದು ಕಂಡುಬಂದಿಲ್ಲ’ ಎಂದು ಹೇಳಿದೆ.

ಧಾರಾವಿ ಪುನರಾಭಿವೃದ್ಧಿ ಯೋಜನೆಯು ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ವೇಳೆ ರಾಜಕೀಯವಾಗಿ ಬಹುಚರ್ಚಿತ ವಿಷಯವಾಗಿತ್ತು. ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಆಘಾಡಿ ಕೂಟಕ್ಕೆ ಪ್ರತಿಷ್ಠೆಯ ವಿಷಯವಾಗಿತ್ತು.  

ADVERTISEMENT

₹5,069 ಕೋಟಿ ಮೊತ್ತದ ಈ ಟೆಂಡರ್‌ ಅನ್ನು ಸರ್ಕಾರವು ಅದಾನಿ ಸಮೂಹಕ್ಕೆ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು. 

ಪ್ರಕರಣ ಏನು?:

2018ರಲ್ಲಿ ನಡೆದ ಟೆಂಡರ್‌ನಲ್ಲಿ ಯುಎಇ ಮೂಲದ ಸೆಕ್ಲಿಂಕ್ ಟೆಕ್ನಾಲಜೀಸ್ ಕಂಪನಿಯು ₹7,200 ಕೋಟಿಗೆ ಬಿಡ್‌ ಸಲ್ಲಿಸಿ, ಅತಿದೊಡ್ಡ ಬಿಡ್ಡರ್‌ ಆಗಿತ್ತು.

ಆದರೆ, ಸರ್ಕಾರವು 2022ರಲ್ಲಿ ಈ ಟೆಂಡರ್ ರದ್ದುಪಡಿಸಿ ಹೆಚ್ಚುವರಿ ಷರತ್ತುಗಳೊಂದಿಗೆ ಹೊಸ ಟೆಂಡರ್‌ ಪ್ರಕಟಿಸಿತ್ತು. ಈ ಟೆಂಡರ್‌ ಅದಾನಿ ಸಮೂಹದ ಪಾಲಾಗಿತ್ತು.

ಸರ್ಕಾರವು ಅದಾನಿ ಸಮೂಹಕ್ಕೆ ಅನುಕೂಲ ಕಲ್ಪಿಸಲು ತನ್ನ ಸೇರಬೇಕಿದ್ದ ಟೆಂಡರ್‌ ಅನ್ನು ರದ್ದುಪಡಿಸಿದೆ ಎಂದು ಸೆಕ್ಲಿಂಕ್ ಟೆಕ್ನಾಲಜೀಸ್ ಕಂಪನಿಯು ಹೈಕೋರ್ಟ್‌ನ ಮೆಟ್ಟಿಲೇರಿತ್ತು.

ಮುಂಬೈನ ಹೃದಯ ಭಾಗದಲ್ಲಿರುವ ಈ ಕೊಳೆಗೇರಿ ಪ್ರದೇಶವು 259 ಹೆಕ್ಟೇರ್‌ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.