ನವದೆಹಲಿ: ವೇಗವಾಗಿ ಚೇತರಿಕೆ ಕಾಣುತ್ತಿರುವ ಅರ್ಥ ವ್ಯವಸ್ಥೆಯ ಅಗತ್ಯಗಳನ್ನು ಪೂರೈಸಲು, ಉದ್ಯಮ ವಲಯಕ್ಕೆ ಸಾಲ ವಿತರಣೆಯನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹಣಕಾಸು ತಂತ್ರಜ್ಞಾನ ಹಾಗೂ ನವೋದ್ಯಮ ವಲಯದ ಕಂಪನಿಗಳ ಅಗತ್ಯಗಳಿಗೆ ಅನುಗುಣವಾಗಿ ಹಣಕಾಸಿನ ಉತ್ಪನ್ನಗಳನ್ನು ಒದಗಿಸಬೇಕು ಎಂದೂ ಅವರು ಪ್ರತಿಪಾದಿಸಿದರು.
ಖಾಸಗಿ ವಲಯವನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಸರ್ಕಾರ ತೊಡಗಿದ್ದರೂ, ಬ್ಯಾಂಕಿಂಗ್ ಮತ್ತು ವಿಮಾ ವಲಯಗಳಲ್ಲಿ ಬಡವರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಇರಬೇಕಾಗುತ್ತದೆ ಎಂದು ಹೇಳಿದರು.
ಹಣಕಾಸು ಸೇವೆಗಳಿಗೆ ಸಂಬಂಧಿಸಿದಂತೆ ಬಜೆಟ್ನಲ್ಲಿ ಮಾಡಲಾದ ಘೋಷಣೆಗಳ ಕುರಿತ ವೆಬಿನಾರ್ನಲ್ಲಿ ಮಾತನಾಡಿದ ಮೋದಿ ಅವರು, ‘ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್ಎಂಇ) ಉದ್ದಿಮೆಗಳು ಹಾಗೂ ನವೋದ್ಯಮಗಳಿಗೆ ಸಾಲ ವಿತರಣೆ ವಿಸ್ತರಿಸುವುದು ಅಗತ್ಯ. ಸರ್ಕಾರವು ಸುಧಾರಣೆಗಳನ್ನು ತರುತ್ತಿದೆ; ಕೃಷಿ, ಕಲ್ಲಿದ್ದಲು ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳನ್ನು ಮುಕ್ತಗೊಳಿಸಿದೆ. ಈಗ ಹಣಕಾಸು ವಲಯವು ಗ್ರಾಮೀಣ ಹಾಗೂ ಸಣ್ಣ ನಗರ ಪ್ರದೇಶಗಳ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು, ಆ ಪ್ರದೇಶಗಳು ಆತ್ಮನಿರ್ಭರ ಭಾರತದ ಪಾಲಿಗೆ ಶಕ್ತಿಯಾಗುವಂತೆ ಮಾಡಬೇಕಿದೆ’ ಎಂದರು.
'10–12 ವರ್ಷಗಳ ಹಿಂದೆ ಸಾಲ ವಿತರಿಸುವುದಕ್ಕೆ ಬಹಳ ಆದ್ಯತೆ ನೀಡಿದ್ದ ಕಾರಣದಿಂದಾಗಿ ಹಣಕಾಸು ವಲಯಕ್ಕೆ ತೊಂದರೆ ಉಂಟಾಯಿತು. ಪಾರದರ್ಶಕ ಅಲ್ಲದ ಸಾಲ ವಿತರಣೆ ಸಂಸ್ಕೃತಿಯಿಂದ ದೇಶವನ್ನು ಹೊರತರಲು ಕ್ರಮ ಕೈಗೊಳ್ಳಲಾಗಿದೆ. ವಸೂಲಾಗದ ಸಾಲಗಳ (ಎನ್ಪಿಎ) ಬಗ್ಗೆ ತಕ್ಷಣವೇ ಮಾಹಿತಿ ನೀಡುವುದನ್ನು ನಾವು ಈಗ ಕಡ್ಡಾಯಗೊಳಿಸಿದ್ದೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.