ನವದೆಹಲಿ: ‘ದೇಶದ ಆರ್ಥಿಕ ತಳಹದಿ ಸುಭದ್ರವಾಗಿದ್ದು, ಪುಟಿದೇಳುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಪ್ರವಾಸ, ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಕೃಷಿ ಆಧಾರಿತ ಉದ್ಯಮಗಳು ಆರ್ಥಿಕ ಚೇತರಿಕೆ ಮತ್ತು ಉದ್ಯೋಗ ಸೃಷ್ಟಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ’ ಎಂದಿದ್ದಾರೆ.
ಆರ್ಥಿಕತೆಯು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸಲು ಇರುವ ಮಾರ್ಗಗಳ ಕುರಿತಾಗಿಮೋದಿ ಅವರು ಕಳೆದ ಕೆಲವು ದಿನಗಳಿಂದ ಉದ್ಯಮಿಗಳು, ಆರ್ಥಿಕ ತಜ್ಞರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಗುರುವಾರ ನೀತಿ ಆಯೋಗದ ಕಚೇರಿಯಲ್ಲಿ ಆರ್ಥಿಕ ತಜ್ಞರು, ಖಾಸಗಿ ಹೂಡಿಕೆದಾರರು, ವಾಣಿಜ್ಯೋದ್ಯಮಿ
ಗಳು ಮತ್ತು ಕೃಷಿ ಪರಿಣತರೊಂದಿಗೆ ಸಭೆ ನಡೆಸಿದರು. ದೇಶದ ಆರ್ಥಿಕತೆಯನ್ನು 2024ರೊಳಗೆ ₹ 350 ಲಕ್ಷ ಕೋಟಿಗೆ ತಲುಪಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸುವಂತೆ ಕರೆ ನೀಡಿದರು.
ನಿರ್ಮಲಾ ಗೈರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಬಜೆಟ್ ಪೂರ್ವ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಅವರ ಅನುಪಸ್ಥಿತಿಯಲ್ಲಿಯೇ ಮೋದಿ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.