ADVERTISEMENT

ಬೆಳಗಾವಿ: ಒಣದ್ರಾಕ್ಷಿ ಉತ್ಪಾದನೆ ಕುಸಿತ

ದ್ರಾಕ್ಷಿ ಇಳುವರಿಗೆ ಪೆಟ್ಟು: ಬೆಳೆಗಾರರಿಗೆ ದಕ್ಕದ ದರ ಏರಿಕೆ ಲಾಭ

ಇಮಾಮ್‌ಹುಸೇನ್‌ ಗೂಡುನವರ
Published 3 ಮೇ 2025, 23:36 IST
Last Updated 3 ಮೇ 2025, 23:36 IST
   

ಬೆಳಗಾವಿ: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ದ್ರಾಕ್ಷಿ ಇಳುವರಿ ಕುಸಿತ ಕಂಡಿದೆ. ಇದರಿಂದ ಒಣದ್ರಾಕ್ಷಿ ಉತ್ಪಾದನೆಯೂ ಕುಸಿದಿದೆ.

ಮಾರುಕಟ್ಟೆಯಲ್ಲಿ ಪೂರೈಕೆಯ ಕೊರತೆಯಿಂದಾಗಿ ಒಣದ್ರಾಕ್ಷಿ ದರ ಏರುಗತಿಯಲ್ಲಿದೆ. ಆದರೆ, ಇಳುವರಿ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಒಣದ್ರಾಕ್ಷಿ ಉತ್ಪಾದನೆಯಾಗಿಲ್ಲ. ಹಾಗಾಗಿ, ಬೆಲೆ ಏರಿಕೆಯ ಲಾಭ ಬೆಳೆಗಾರರಿಗೆ ಸಿಗುತ್ತಿಲ್ಲ.

ಕಳೆದ ವರ್ಷ ಕೆ.ಜಿ ಒಣದ್ರಾಕ್ಷಿಗೆ ₹80ರಿಂದ ₹130 ದರವಿತ್ತು. ಈ ವರ್ಷ ಮಹಾರಾಷ್ಟ್ರದ ತಾಸಗಾಂವ್‌, ಸಾಂಗ್ಲಿ, ಪಂಢರಪುರ ಮಾರುಕಟ್ಟೆಯಲ್ಲಿ ಕೆ.ಜಿಗೆ ₹180ರಿಂದ ₹300 ಧಾರಣೆ ಇದೆ. ಸರಾಸರಿ ದರ ₹‌250ರ ವರೆಗೂ ಇದೆ.

ADVERTISEMENT

‘2023ರಲ್ಲಿ 5 ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೆ. ಒಟ್ಟು 14.5 ಟನ್‌ ಒಣದ್ರಾಕ್ಷಿ ಉತ್ಪಾದನೆಯಾಗಿತ್ತು. ಈ ಬಾರಿ 8 ಟನ್‌ ಒಣದ್ರಾಕ್ಷಿ ಉತ್ಪಾದನೆಯಾಗಿದ್ದು, ಕೆ.ಜಿಗೆ ₹250 ದರದಲ್ಲಿ ಮಾರಾಟವಾಗಿದೆ. ಹೆಚ್ಚಿನ ದರ ಲಭಿಸಿದರೂ ನಿರೀಕ್ಷಿತ ಲಾಭ ಸಿಕ್ಕಿಲ್ಲ’ ಎಂದು ಅಥಣಿ ಒಣದ್ರಾಕ್ಷಿ ಸಂಸ್ಕರಣಾ ಸಂಘದ ಅಧ್ಯಕ್ಷ ಶಹಾಜಹಾನ್‌ ಡೊಂಗರಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದ ಚಾಟ್ನಿ ವೇಳೆ ಬೆಳೆಗೆ ನೀರಿನ ಕೊರತೆಯಾಯಿತು. ಮತ್ತೊಂದು ಹಂತದ ಚಾಟ್ನಿ ವೇಳೆ ಅಕಾಲಿಕ ಮಳೆಯಿಂದ ಬೆಳೆ ಹಾನಿಗೀಡಾಯಿತು. ಇದರಿಂದ ಇಳುವರಿ ಕುಸಿಯಿತು’ ಎಂದರು.

40 ಸಾವಿರ ಹೆಕ್ಟೇರ್‌ನಲ್ಲಿ ಫಸಲು:

ಈ ಬಾರಿ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ 40 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಈ ಪೈಕಿ ಶೇ 75ರಷ್ಟು ಫಸಲು ಒಣದ್ರಾಕ್ಷಿ ಉತ್ಪಾದನೆಗೆ ಬಳಕೆಯಾಗುತ್ತದೆ. ಎಕರೆಗೆ 3ರಿಂದ 4 ಟನ್‌ ಒಣದ್ರಾಕ್ಷಿ ಉತ್ಪಾದನೆ ಆಗುತ್ತದೆ.

‘ಹವಾಮಾನ ವೈಪರೀತ್ಯದಿಂದ ಈ ಬಾರಿ ಶೇ 65ರಷ್ಟು ರೈತರಿಗೆ ದ್ರಾಕ್ಷಿ ಇಳುವರಿ ನಷ್ಟವಾಗಿದೆ. ಶೇ 35ರಷ್ಟು ರೈತರು ಎಕರೆಗೆ 2 ಟನ್‌ ಒಣದ್ರಾಕ್ಷಿ ಉತ್ಪಾದಿಸಿದ್ದಾರೆ’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್‌ ನಾಂದ್ರೇಕರ ತಿಳಿಸಿದರು.

‘ಒಣದ್ರಾಕ್ಷಿ ಮಾರಲು ಮಹಾರಾಷ್ಟ್ರಕ್ಕೆ ಒಯ್ದರೆ ಹೆಚ್ಚಿನ ಹಣ ವ್ಯಯಿಸಬೇಕು. ನಮಗೆ ಹೆಚ್ಚು ನಷ್ಟವಾಗುತ್ತದೆ ಹೊರತು ಲಾಭವಾಗುವುದಿಲ್ಲ’ ಎಂದು ಅಥಣಿ ತಾಲ್ಲೂಕಿನ ಐಗಳಿಯ ರೈತ ಎಂ.ಜಿ. ಪಾಟೀಲ ಹೇಳಿದರು.

ಇಳುವರಿ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು. ಫಸಲ್‌ ಬಿಮಾ ಯೋಜನೆಯಡಿ ಕಂತು ಪಾವತಿಸಿದವರಿಗೆ ಹೆಚ್ಚಿನ ವಿಮಾ ಮೊತ್ತ ನೀಡಬೇಕು.
ಅಭಯಕುಮಾರ್‌ ನಾಂದ್ರೇಕರ, ಅಧ್ಯಕ್ಷ, ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ
ವರ್ಷಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದರೂ ಅಥಣಿಯಲ್ಲಿ ಒಣದ್ರಾಕ್ಷಿ ಮಾರಾಟಕ್ಕೆ ವ್ಯವಸ್ಥೆ ಇಲ್ಲ. ಸರ್ಕಾರ ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು.
ಎಂ.ಜಿ. ಪಾಟೀಲ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.