ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಳಿ ಇರುವ ಹೆಚ್ಚುವರಿ ಬಂಡವಾಳದಲ್ಲಿನ ₹ 1.76 ಲಕ್ಷ ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಸಮ್ಮತಿಸಿದೆ.
ಆರ್ಬಿಐನ ಮಾಜಿ ಗವರ್ನರ್ ಬಿಮಲ್ ಜಲನ್ ನೇತೃತ್ವದಲ್ಲಿನ ಉನ್ನತ ಮಟ್ಟದ ಸಮಿತಿಯು ಮಾಡಿದ್ದ ಶಿಫಾರಸುಗಳನ್ನು ಕೇಂದ್ರೀಯ ಬ್ಯಾಂಕ್ನ ನಿರ್ದೇಶಕ ಮಂಡಳಿಯು ಒಪ್ಪಿಕೊಂಡಿದೆ. ಸೋಮವಾರ ಇಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಒಟ್ಟು ₹ 1,76,051 ಕೋಟಿಗಳಷ್ಟು ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲಾಗುವುದು. 2018–19ನೆ ಹಣಕಾಸು ವರ್ಷಕ್ಕೆ ₹ 1,23,414 ಕೋಟಿ ಮೊತ್ತವನ್ನು ಹೆಚ್ಚುವರಿ ನಿಧಿ ರೂಪದಲ್ಲಿ ಮತ್ತು ₹ 52,637 ಕೋಟಿಯು ಬ್ಯಾಂಕ್ನ ಪರಿಷ್ಕೃತ ನಿಧಿಯಲ್ಲಿನ ಹೆಚ್ಚುವರಿ ಮೊತ್ತದ ರೂಪದಲ್ಲಿ ಇರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
₹ 40 ಸಾವಿರದತ್ತ ಚಿನ್ನ
ದೇಶದಾದ್ಯಂತ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಚಿನ್ನದ ಧಾರಣೆಯು ಪ್ರತಿ 10 ಗ್ರಾಂಗಳಿಗೆ ₹ 40 ಸಾವಿರದ ಸಮೀಪಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಸೋಮವಾರ ತಲಾ 10 ಗ್ರಾಂ ಚಿನ್ನದ ದರ ₹ 238 ರಂತೆ ಏರಿಕೆಯಾಗಿ ₹ 38,846ಕ್ಕೆ ತಲುಪಿದೆ. ಮುಂಬೈನಲ್ಲಿ ₹ 953 ರಂತೆ ಹೆಚ್ಚಾಗಿ ₹ 38,560ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಸತತ 5ನೇ ದಿನವೂ ಏರುತ್ತಿರುವ ದರವು ₹ 675ರಂತೆ ಹೆಚ್ಚಳಗೊಂಡು ₹39,670ಕ್ಕೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.