ADVERTISEMENT

ಆರ್‌ಬಿಐ ಬಡ್ಡಿದರ ಯಥಾಸ್ಥಿತಿ ಸಾಧ್ಯತೆ: ತಜ್ಞರ ಅಭಿಪ್ರಾಯ

ಪಿಟಿಐ
Published 3 ಅಕ್ಟೋಬರ್ 2021, 11:07 IST
Last Updated 3 ಅಕ್ಟೋಬರ್ 2021, 11:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆ ಏರಿಕೆ ಆಗುತ್ತಿರುವುದು ಹಾಗೂ ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಈ ಬಾರಿಯೂ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್‌ 6ರಿಂದ ಮೂರು ದಿನಗಳವರೆಗೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆ ನಡೆಯಲಿದೆ. ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಆರ್ಥಿಕತೆಯಲ್ಲಿ ಬೇಡಿಕೆ ಸೃಷ್ಟಿಸುವ ಉದ್ದೇಶದಿಂದ ಆರ್‌ಬಿಐ 2020ರ ಮೇ ತಿಂಗಳಿನಲ್ಲಿ ರೆಪೊ ದರದಲ್ಲಿ ಶೇ 0.40ರಷ್ಟು ಕಡಿತ ಮಾಡಿತ್ತು. ಅದರಿಂದಾಗಿ ರೆಪೊ ದರವು ಶೇ 4ಕ್ಕೆ ಇಳಿಕೆ ಆಗಿತ್ತು. ಆ ಬಳಿಕ ಇಲ್ಲಿಯವರೆಗೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದನ್ನು ಆರ್‌ಬಿಐ ಮುಂದುವರಿಸಲಿದ್ದು, ತನ್ನ ಹೊಂದಾಣಿಕೆಯ ನಿಲುವನ್ನು ಸಹ ಕಾಯ್ದುಕೊಳ್ಳುವ ನಿರೀಕ್ಷೆ ಇದೆ ಎಂದು ಮಾರ್ಗನ್‌ ಸ್ಟ್ಯಾನ್ಲಿಯ ತಜ್ಞರು ಹೇಳಿದ್ದಾರೆ.

ADVERTISEMENT

‘ಆರ್ಥಿಕತೆಯು ಈಗಷ್ಟೇ ಬೆಳವಣಿಗೆ ಹಾದಿಗೆ ಮರಳಿದೆ. ಹೀಗಾಗಿ, ದರವು ಮತ್ತೆ ಹೆಚ್ಚಾಗಲಾರದು. ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಯಿಂದಾಗಿ ಹಣದುಬ್ಬರವು ಉಂಟಾಗಿದೆ ಎನ್ನುವುದು ನನ್ನ ಭಾವನೆ. ಒಮ್ಮೆ ಈ ಅಡಚಣೆ ನಿವಾರಣೆ ಆದರೆ ಹಿಂದಿನ ಬಾರಿಯ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ಸಂದರ್ಭದಲ್ಲಿ ಕಂಡಷ್ಟು ಏರಿಕೆಯನ್ನು ಹಣದುಬ್ಬರವು ಕಾಣದೇ ಇರಬಹುದು’ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್‌ ಖಾರಾ ಅವರು ಈಚೆಗಷ್ಟೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.