ADVERTISEMENT

ಸಾಲ ಕೊಡುವ ಆ್ಯಪ್‌: ಶೀಘ್ರವೇ ನಿಯಮ

ಪಿಟಿಐ
Published 9 ಜೂನ್ 2022, 19:31 IST
Last Updated 9 ಜೂನ್ 2022, 19:31 IST
   

ಮುಂಬೈ (ಪಿಟಿಐ): ಡಿಜಿಟಲ್ ವೇದಿಕೆಗಳ ಮೂಲಕ ಸಾಲ ವಿತರಣೆ ಮಾಡುವ ಕಂಪನಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಡಿಜಿಟಲ್ ವೇದಿಕೆ (ಆ್ಯಪ್) ಮೂಲಕ ಸಾಲ ನೀಡಿದವರು ಕಿರುಕುಳ ಕೊಟ್ಟ ಕಾರಣಕ್ಕೆ, ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗಿವೆ.

‘ವಿಸ್ತೃತವಾದ ನಿಯಮಗಳನ್ನು ನಾವು ಶೀಘ್ರದಲ್ಲಿಯೇ ಅಂತಿಮಗೊಳಿಸಲಿದ್ದೇವೆ. ಇವು ಸಾಲ ಕೊಡುವ ಡಿಜಿಟಲ್ ವೇದಿಕೆಗಳಿಂದ ಎದುರಾಗಿರುವ ಸವಾಲುಗಳನ್ನು ನಿಭಾಯಿಸಲು ನೆರವಾಗಲಿವೆ. ಹಲವು ಡಿಜಿಟಲ್ ವೇದಿಕೆಗಳು ಅಕ್ರಮವಾಗಿವೆ’ ಎಂದು ದಾಸ್ ಅವರು ಉಪನ್ಯಾಸವೊಂದರಲ್ಲಿ ಹೇಳಿದ್ದಾರೆ.

ADVERTISEMENT

ಡಿಜಿಟಲ್ ವೇದಿಕೆಗಳ ಮೂಲಕ ಸಾಲ ಪಡೆದವರು ಸಮಸ್ಯೆ ಎದುರಾದಲ್ಲಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬೇಕು ಎಂದು ದಾಸ್ ಅವರು ಬುಧವಾರ ಸಲಹೆ ಮಾಡಿದ್ದರು. ಸಾಲ ಒದಗಿಸುವ ಬಹುತೇಕ ಡಿಜಿಟಲ್ ಆ್ಯಪ್‌ಗಳಿಗೆ ಆರ್‌ಬಿಐ ಅನುಮತಿ ಇಲ್ಲ. ಅವು ತಮ್ಮಷ್ಟಕ್ಕೆ ತಾವೇ ಕಾರ್ಯ ನಿರ್ವಹಿಸುತ್ತಿವೆ ಎಂದು ದಾಸ್ ತಿಳಿಸಿದ್ದರು.

‘ಸಾಲ ಕೊಡುವ ಆ್ಯಪ್‌ ಆರ್‌ಬಿಐನಲ್ಲಿ ನೋಂದಣಿ ಮಾಡಿಕೊಂಡಿದೆಯೇ ಎಂಬುದನ್ನು ಪರಿಶೀಲಿಸಿ. ಅದು ನೋಂದಣಿ ಆಗಿದೆ ಎಂದಾದರೆ, ಅದು ತಪ್ಪು ಮಾಡಿದಾಗ ಆರ್‌ಬಿಐ ಕ್ರಮ ಜರುಗಿಸುತ್ತದೆ. ಈ ಭರವಸೆಯನ್ನು ನಾನು ನೀಡುತ್ತೇನೆ’ ಎಂದು ಕೂಡ ದಾಸ್ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.