ಮುಂಬೈ: ಸಕಾಲಕ್ಕೆ ಸಾಲ ಮರುಪಾವತಿ ಆಗುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ದಾರಿಯೊಂದನ್ನು ಕಂಡುಕೊಂಡಿದೆ. ತಿಂಗಳ ಕಂತನ್ನು ಬಾಕಿ ಉಳಿಸಿಕೊಳ್ಳುವ ಸಾಧ್ಯತೆ ಇರುವ ರಿಟೇಲ್ ಸಾಲಗಾರರಿಗೆ ಚಾಕಲೇಟ್ ಕಳುಹಿಸುವ ಮೂಲಕ ಅಭಿನಂದಿಸಲು ಮುಂದಾಗಿದೆ.
ತಿಂಗಳ ಕಂತನ್ನು ಪಾವತಿಸದೇ ಇರಲು ನಿರ್ಧರಿಸುವ ಸಾಲಗಾರನು ಇಎಂಐ ಪಾವತಿಸಲು ಬ್ಯಾಂಕ್ನಿಂದ ಬರುವ ‘ನೆನಪಿಸುವ ಕರೆ’ಗೆ ಉತ್ತರಿಸುವುದಿಲ್ಲ. ಇಂತಹ ಗ್ರಾಹಕರಿಗೆ ಅವರ ಮನೆಗೆ ಭೇಟಿ ನೀಡಿ ಚಾಕಲೇಟ್ ನೀಡುವ ಮೂಲಕ ನೆನಪಿಸುವ ಕೆಲಸ ಮಾಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಈ ವ್ಯವಸ್ಥೆಗಾಗಿ ಎರಡು ಫಿನ್ಟೆಕ್ ಕಂಪನಿಗಳು ಕೆಲಸ ಮಾಡಲಿವೆ. ಒಂದು ಕಂಪನಿಯು ಸಾಲಗಾರರೊಂದಿಗೆ ಸಮನ್ವಯ ಸಾಧಿಸಲಿದೆ. ಇನ್ನೊಂದು ಕಂಪನಿಯು ಸಾಲಗಾರ ತಿಂಗಳ ಕಂತು ಪಾವತಿಸದೇ ಇರುವ ಸಾಧ್ಯತೆಯ ಕುರಿತು ಬ್ಯಾಂಕ್ಗೆ ಎಚ್ಚರಿಸಲಿದೆ. ತಿಂಗಳ ಕಂತು ಬಾಕಿ ಉಳಿಸಿಕೊಳ್ಳುವ ಪ್ರತಿ ಸಾಲಗಾರನ ಮನೆಗೆ ಕಂಪನಿಯ ಪ್ರತಿನಿಧಿಯು ಚಾಕಲೇಟ್ನೊಂದಿಗೆ ಭೇಟಿ ನೀಡಿ ಇಎಂಐ ಬಗ್ಗೆ ನೆನಪು ಮಾಡಿಕೊಡಲಿದ್ದಾರೆ ಎಂದು ಎಸ್ಬಿಐನ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಿ ಕುಮಾರ್ ತಿವಾರಿ ಮಾಹಿತಿ ನೀಡಿದ್ದಾರೆ.
ಫಿನ್ಟೆಕ್ ಕಂಪನಿಗಳ ಹೆಸರು ಹೇಳಲು ತಿವಾರಿ ನಿರಾಕರಿಸಿದ್ದಾರೆ. ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿ ಇದ್ದು, 15 ದಿನದ ಹಿಂದಷ್ಟೇ ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಎಸ್ಬಿಐ ರಿಟೇಲ್ ಸಾಲ ನೀಡಿಕೆಯು 2023ರ ಜೂನ್ ತ್ರೈಮಾಸಿಕದಲ್ಲಿ ಶೇ 16.46ರಷ್ಟು ಬೆಳವಣಿಗೆ ಕಂಡಿದ್ದು ₹12.04 ಲಕ್ಷ ಕೋಟಿಯಷ್ಟು ಆಗಿದೆ. ಒಟ್ಟು ಸಾಲವು ₹33.03 ಲಕ್ಷ ಕೋಟಿಯಷ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.