ಮುಂಬೈ : ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಗೆ (ಒಪಿಎಸ್) ಮರಳುತ್ತಿರುವುದು ಅವುಗಳ ಹಣಕಾಸಿನ ಒತ್ತಡವನ್ನು ಮಧ್ಯಮ ಅವಧಿಯಲ್ಲಿ ಅಥವಾ ದೀರ್ಘಾವಧಿಯಲ್ಲಿ ನಿಭಾಯಿಸಲು ಸಾಧ್ಯವಿಲ್ಲದ ಸ್ಥಿತಿಗೆ ಒಯ್ಯಬಹುದು ಎಂದು ಆರ್ಬಿಐ ಲೇಖನವೊಂದು ಎಚ್ಚರಿಸಿದೆ. ರಾಜ್ಯಗಳು ಒಪಿಎಸ್ ಕಡೆ ಮರಳುತ್ತಿರುವುದು ‘ಹಿಮ್ಮುಖ ಚಲನೆಯ ಪ್ರಮುಖ ಹೆಜ್ಜೆ’ ಎಂದು ಕೂಡ ಈ ಲೇಖನ ಹೇಳಿದೆ.
ಪಿಂಚಣಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಕ್ರಮಗಳ ಭಾಗವಾಗಿ ಎನ್ಪಿಎಸ್ ಜಾರಿಗೆ ತರಲಾಯಿತು. ಆದರೆ ಒಪಿಎಸ್ ಜಾರಿಯಿಂದ ಆಗುವ ಹಣಕಾಸಿನ ಒಟ್ಟು ಹೊರೆಯು, ಎನ್ಪಿಎಸ್ನಿಂದ ಆಗುವ ಹೊರೆಗಿಂತ ನಾಲ್ಕೂವರೆ ಪಟ್ಟು ಹೆಚ್ಚಾಗಬಹುದು ಎಂದು ಲೇಖನದಲ್ಲಿ ಹೇಳಲಾಗಿದೆ. ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವು ಆರ್ಬಿಐನ ಅಭಿಪ್ರಾಯ ಅಲ್ಲ.
ರಾಜಸ್ಥಾನ, ಚತ್ತೀಸಗಢ, ಜಾರ್ಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಒಪಿಎಸ್ ಜಾರಿಗೆ ತರುವುದಾಗಿ ಈಚೆಗೆ ಹೇಳಿವೆ. ‘ಅಲ್ಪಾವಧಿಯಲ್ಲಿ ಪಿಂಚಣಿಗೆ ರಾಜ್ಯ ಸರ್ಕಾರಗಳು ನೀಡಬೇಕಿರುವ ಮೊತ್ತ ಕಡಿಮೆ ಆಗುವುದು ಒಪಿಎಸ್ ಕಡೆ ಮುಖ ಮಾಡಲು ಕಾರಣವಾಗಿರಬಹುದು. ಆದರೆ ದೀರ್ಘಾವಧಿಯಲ್ಲಿ ಪಿಂಚಣಿಗಾಗಿ ನೀಡಬೇಕಿರುವ ಮೊತ್ತವು, ಈಗಿನ ಉಳಿತಾಯವನ್ನು ಮರೆಮಾಚುವಂತೆ ಇರುತ್ತದೆ’ ಎಂದು ಲೇಖನದಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.