
ಸಕ್ಕರೆ
ಚಿತ್ರ: ಗೆಟ್ಟಿ
ನವದೆಹಲಿ: ಸಕ್ಕರೆಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಪರಿಷ್ಕರಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.
ಸಕ್ಕರೆ ಕಾರ್ಖಾನೆಗಳ ಬಾಕಿ ಪಾವತಿಗಳ ಮೊತ್ತವು ಹೆಚ್ಚಾಗುತ್ತಿದೆ, ಅದು ನವೆಂಬರ್ ಅಂತ್ಯಕ್ಕೆ ಮಹಾರಾಷ್ಟ್ರದಲ್ಲೇ ₹2,000 ಕೋಟಿಯಷ್ಟಾಗಿದೆ. ದಾಸ್ತಾನು ಹೆಚ್ಚಿರುವುದು, ಉತ್ಪಾದನಾ ವೆಚ್ಚ ಹೆಚ್ಚಳ, ಎಥೆನಾಲ್ ಉತ್ಪಾದನೆಗೆ ಸಕ್ಕರೆ ಬಳಕೆಗೆ ಮಿತಿ, ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಇಳಿಕೆಯ ಕಾರಣಗಳಿಂದಾಗಿ ಸಕ್ಕರೆ ಕಾರ್ಖಾನೆಗಳು ನಗದು ಕೊರತೆಯನ್ನು ಎದುರಿಸುತ್ತಿವೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘವು (ಐಎಸ್ಎಂಎ) ಹೇಳಿದೆ.
ಐಎಸ್ಎಂಎ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಮಾತನಾಡಿದ ಚೋಪ್ರಾ, ‘ಅವರು (ಐಎಸ್ಎಂಎ) ನಮಗೆ ಸಮಸ್ಯೆಗಳನ್ನು ಹೇಳಿದ್ದಾರೆ... ಮುಂದಿನ ಒಂದೆರಡು ತಿಂಗಳಲ್ಲಿ ನಾವು ಕಾರ್ಖಾನೆಗಳಿಗೆ ನೆರವಾಗುವ ರೀತಿಯಲ್ಲಿ ಹಾಗೂ ರೈತರಿಗೆ ಸಕಾಲದಲ್ಲಿ ಪಾವತಿಗಳು ಆಗುವ ರೀತಿಯಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
ಎಂಎಸ್ಪಿ ಪರಿಷ್ಕರಣೆ, ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಅವಕಾಶ ನೀಡುವುದು, ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಸಕ್ಕರೆ ಬಳಸಲು ಅವಕಾಶ ಕಲ್ಪಿಸುವುದು ಸೇರಿದಂತೆ ಎಲ್ಲ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ.
ಸಕ್ಕರೆ ಎಂಎಸ್ಪಿ ದರ ಕೆ.ಜಿ.ಗೆ ₹31ರ ಮಟ್ಟದಲ್ಲಿ 2019ರ ಫೆಬ್ರುವರಿಯಿಂದ ಇದೆ. ಇದನ್ನು ಕೆ.ಜಿ.ಗೆ ₹41.66ಕ್ಕೆ ಹೆಚ್ಚಿಸಬೇಕು ಎಂಬುದು ಐಎಸ್ಎಂಎ ಬೇಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.