ಸಾಂದರ್ಭಿಕ ಚಿತ್ರ
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಮಂಡಿಸಿರುವ ಬಜೆಟ್ ಅನ್ನು ‘ಸಿಮೆಂಟ್ ತಯಾರಕರ ಸಂಘ’ (ಸಿಎಂಎ) ಸ್ವಾಗತಿಸಿದ್ದು, ‘ಇದು ಸಿಮೆಂಟ್ನಂತಹ ಮೂಲಸೌಕರ್ಯ ಸಂಬಂಧಿತ ವಲಯಗಳಿಗೆ ಉತ್ತಮ ಬೇಡಿಕೆ ಬರುವ ಮುನ್ಸೂಚನೆ ನೀಡಿದೆ’ ಎಂದು ಹೇಳಿದೆ.
ಬಂಡವಾಳ ವೆಚ್ಚವನ್ನು ₹12.2 ಲಕ್ಷ ಕೋಟಿಗೆ ಹೆಚ್ಚಿಸುವ ಮೂಲಕ ಮೂಲಸೌಕರ್ಯ ಸೃಷ್ಟಿಯೇ ಆರ್ಥಿಕ ಬೆಳವಣಿಗೆಯ ಪ್ರಾಥಮಿಕ ಆಧಾರ ಎಂಬುದನ್ನು ಬಜೆಟ್ ಗುರುತಿಸಿದೆ. ಇದು ದೇಶದ ಸಿಮೆಂಟ್ ಉದ್ಯಮಕ್ಕೆ ಪೂರಕವಾಗಿದೆ. ಐದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ಹಂತದ ಮತ್ತು 3ನೇ ಹಂತದ ನಗರಗಳಿಗೆ ಹೆಚ್ಚಿನ ಒತ್ತು ನೀಡಿರುವುದರಿಂದ ನಗರಗಳ ವಿವಿಧ ವಲಯಗಳಲ್ಲಿ ನಿರ್ಮಾಣ ಚಟುವಟಿಕೆಗಳು ವೇಗ ಪಡೆದುಕೊಳ್ಳಲಿವೆ ಎಂದು ಸಿಎಂಎ ಪ್ರಕಟಣೆ ಹೇಳಿದೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂಎ ಅಧ್ಯಕ್ಷ ಪಾರ್ಥ್ ಜಿಂದಾಲ್ ಅವರು, ‘ಜಿಎಸ್ಟಿ ದರ ಪರಿಷ್ಕರಣೆ, ಹೊಸದಾದ ಕಾರ್ಮಿಕ ಸಂಹಿತೆಗಳ ಜಾರಿ ಸೇರಿದಂತೆ 350ಕ್ಕೂ ಹೆಚ್ಚು ಸುಧಾರಣಾ ಕ್ರಮಗಳು ಸಿಮೆಂಟ್ನಂತಹ ಬಂಡವಾಳ ಕೇಂದ್ರಿತ ವಲಯಗಳಿಗೆ ಒಳ್ಳೆಯದು’ ಎಂದು ಹೇಳಿದ್ದಾರೆ.
ಸಿಎಂಎ ಉಪಾಧ್ಯಕ್ಷ ಡಾ. ರಾಘವಪತ್ ಸಿಂಘಾನಿಯಾ ಅವರು, ‘ಬಂಡವಾಳ ವೆಚ್ಚದ ಹೆಚ್ಚಳ, ಪ್ರವಾಸೋದ್ಯಮ, ಸಾಮಾಜಿಕ ಮೂಲಸೌಕರ್ಯಗಳ ಮೇಲಿನ ಹೂಡಿಕೆಗಳು ಸಿಮೆಂಟ್ ವಲಯದ ಬೆಳವಣಿಗೆಗೆ ವೇಗ ನೀಡಲಿವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.