ನವದೆಹಲಿ: ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಯೆಸ್ ಬ್ಯಾಂಕ್ ಮೇಲೆ ಆರ್ಬಿಐ ನಿಷೇಧ ಹೇರಿದ ನಂತರ ಫೋನ್ ಪೇಮೂಲಕ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.
‘ನಾವು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅನಿಗದಿತ ನಿರ್ವಹಣೆ ಕಾರ್ಯದಲ್ಲಿದ್ದೇವೆ. ಇದರಿಂದ ಉಂಟಾಗುವ ಯಾವುದೇ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಾವು ಶೀಘ್ರದಲ್ಲೇ ಹಿಂತಿರುಗಲಿದ್ದೇವೆ’ ಎಂಬ ಸಂದೇಶ ಫೋನ್ ಪೆ ಆ್ಯಪ್ನಲ್ಲಿ ಕಾಣಿಸುತ್ತಿದೆ.
‘ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬೇಗ ಸೇವೆಗಳಿಗೆ ಮರಳಲುಪ್ರಯತ್ನಿಸುತ್ತೇವೆ’ ಎಂದು ಫೋನ್ ಪೇಕಂಪನಿ ಹೇಳಿದೆ.
ಫೋನ್ ಪೇಕಂಪನಿಯು ಯೆಸ್ ಬ್ಯಾಂಕ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಈಗ ಹಣಕಾಸು ಬಿಕ್ಕಟ್ಟಿಗೆ ಸಿಲುಕಿಕೊಂಡಿರುವ ಯೆಸ್ ಬ್ಯಾಂಕ್ನ ಚಟುವಟಿಕೆಗಳ ಮೇಲೆ ಆರ್ಬಿಐ ನಿಷೇಧ ಹೇರಿದ ನಂತರ ಫೋನ್ ಪೇಸೇವೆಗಳು ಅಲಭ್ಯವಾಗಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಫೋನ್ ಪೇ ಸಿಇಒ ಸಮೀರ್, ‘ಆತ್ಮೀಯ ಗ್ರಾಹಕರೇ, ದೀರ್ಘ ಅಡಚನೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ನಮ್ಮ ಪಾಲುದಾರ ಬ್ಯಾಂಕ್ (ಎಸ್ ಬ್ಯಾಂಕ್) ಅನ್ನು ಆರ್ಬಿಐ ನಿಷೇಧಿಸಿದೆ. ಮರಳಿ ಸೇವೆಗಳನ್ನು ಮುಂದುವರೆಸಲು ತಂಡವು ಬಿಡುವಿಲ್ಲದೇ ಕೆಲಸ ಮಾಡುತ್ತಿದೆ. ಕೆಲವೇ ಗಂಟೆಗಳಲ್ಲಿ ಕಾರ್ಯನಿರ್ವಹಿಸುವ ಭರವಸೆ ಇದೆ. ನಿಮ್ಮ ತಾಳ್ಮೆಗೆ ಧನ್ಯವಾದ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.