ನವದೆಹಲಿ: ಜಾಗತಿಕ ವಿದ್ಯಮಾನಗಳು, ಕೋವಿಡ್ ಪ್ರಕರಣಗಳ ಸಂಖ್ಯೆ ಹಾಗೂ ತ್ರೈಮಾಸಿಕ ಫಲಿತಾಂಶವು ವಾರದ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗಲಿರುವ ವ್ಯತ್ಯಾಸ ಹಾಗೂ ಮುಂಗಾರು ಮಳೆ ಪ್ರಗತಿ ಸಹ ಹೂಡಿಕೆ ಚಟುವಟಿಕೆಯನ್ನು ನಿರ್ಧರಿಸಲಿವೆ ಎಂದೂ ಹೇಳಿದ್ದಾರೆ.
ಮೊದಲ ತ್ರೈಮಾಸಿಕದ ಫಲಿತಾಂಶ:‘ತ್ರೈಮಾಸಿಕ ಫಲಿತಾಂಶದಲ್ಲಿ ಐಟಿ ವಲಯದ ಪ್ರಮುಖ ಕಂಪನಿ ಟಿಸಿಎಸ್ ಮಂಗಳವಾರ ತನ್ನ ಆರ್ಥಿಕ ಸಾಧನೆ ಪ್ರಕಟಿಸಲಿದೆ’ ಎಂದು ರೆಲಿಗೇರ್ ಬ್ರೋಕಿಂಗ್ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್ ಮಿಶ್ರಾ ತಿಳಿಸಿದ್ದಾರೆ.
ಕಂಪನಿಗಳ ತ್ರೈಮಾಸಿಕದ ಫಲಿತಾಂಶದಿಂದ ಕೋವಿಡ್ ಬಿಕ್ಕಟ್ಟಿನ ನಿಜವಾದ ಪರಿಣಾಮ ಅರಿಯಲು ಸಾಧ್ಯವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಅಂಕಿ–ಅಂಶವು ಶುಕ್ರವಾರ ಮಾರುಕಟ್ಟೆಯ ವಹಿವಾಟು ಮುಗಿದ ಮೇಲೆ ಹೊರಬೀಳಲಿದೆ.
ಸತತ ಮೂರನೇ ವಾರವೂ ಷೇರುಪೇಟೆಗಳ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟದ ಸಮೀಪದಲ್ಲಿದೆ.
ಐಪಿಒ ಮೇಲೂ ಪರಿಣಾಮ: ಕೋವಿಡ್ನಿಂದಾಗಿ ಸಾರ್ವಜನಿಕರಿಗೆ ಆರಂಭಿಕ ಷೇರು ಮಾರಾಟ (ಐಪಿಒ) ಪ್ರಕ್ರಿಯೆಗೂ ಹಿನ್ನಡೆಯಾಗಿದೆ.
ಜೂನ್ ತ್ರೈಮಾಸಿಕದಲ್ಲಿ₹15 ಕೋಟಿ ಮೌಲ್ಯದ ನಾಲ್ಕು ಐಪಿಒಗಳು ಮಾತ್ರವೇ ಬಿಡುಗಡೆ ಆಗಿವೆ ಎಂದು ಇಆ್ಯಂಡ್ವೈ ಇಂಡಿಯಾ ತಿಳಿಸಿದೆ.
ಜಾಗತಿಕ ಮಾರುಕಟ್ಟೆಯಂತೆಯೇ ಭಾರತದಲ್ಲಿ ಐಪಿಒ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಸೀಮಿತವಾಗಿವೆ.
ಕಂಪನಿಗಳು ದೀರ್ಘಾವಧಿಯ ಬೆಳವಣಿಗೆ ಯೋಜನೆಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿವೆ. 2020ರ ಅಂತ್ಯಕ್ಕೆ ಅಥವಾ 2021ರ ಆರಂಭದಲ್ಲಿ ಐಪಿಒ ಚಟುವಟಿಕೆಗಳು ಸುಧಾರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಲಕ್ಷ್ಮೀ ಗೋಲ್ಡೋರ್ನಾ ಹೌಸ್ ಲಿಮಿಟೆಡ್, ನಿರ್ಮಿತಿ ರೊಬೊಟಿಕ್ಸ್ ಇಂಡಿಯಾ, ಬಿಲ್ವಿನ್ ಇಂಡಸ್ಟ್ರಿಸ್ ಮತ್ತು ಡಿಜೆ ಮೀಡಿಯಾ ಪಾಯಿಂಟ್ ಆ್ಯಂಡ್ ಲಾಜಿಸ್ಟಿಕ್ಸ್ ಕಂಪನಿಗಳು ಜೂನ್ ತ್ರೈಮಾಸಿಕದಲ್ಲಿ ಐಪಿಒ ಬಿಡುಗಡೆ ಮಾಡಿವೆ.
ಪೇಟೆಯಲ್ಲಿ ಮನೆ ಮಾಡಿರುವ ಆತಂಕದ ಕಾರಣಗಳು
* ಕೋವಿಡ್ಗೆ ತುತ್ತಾಗುತ್ತಿರುವ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆ
* ಭಾರತ–ಚೀನಾ ಗಡಿ ಬಿಕ್ಕಟ್ಟು
* ಕಂಪನಿಗಳ ಆರ್ಥಿಕ ಸಾಧನೆ ಆಧರಿಸಿ ಸೂಚ್ಯಂಕದಲ್ಲಿ ಏರಿಳಿತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.