ADVERTISEMENT

ಹೊಸ ಹಣಕಾಸು ವರ್ಷಕ್ಕೆ ನೀರಸ ಸ್ವಾಗತ: ಕರಗಿತು ₹ 3.20 ಲಕ್ಷ ಕೋಟಿ ಸಂಪತ್ತು

ಪಿಟಿಐ
Published 1 ಏಪ್ರಿಲ್ 2020, 21:26 IST
Last Updated 1 ಏಪ್ರಿಲ್ 2020, 21:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ/ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಗೂಳಿ, ಕರಡಿ ಪರಸ್ಪರ ಜಿದ್ದಾಜಿದ್ದಿಗೆ ಬಿದ್ದಿವೆ. ಒಂದು ದಿನದ ವಹಿವಾಟಿನಲ್ಲಿ ಗೂಳಿ ರಭಸದಿಂದ ಓಡಿ ಸಕಾರಾತ್ಮಕ ವಹಿವಾಟಿಗೆ ಕಾರಣವಾದರೆ, ಮತ್ತೊಂದು ದಿನ ಕರಡಿ ಕುಣಿತಕ್ಕೆ ಸಿಲುಕಿ ಹೂಡಿಕೆದಾರರ ಸಂಪತ್ತು ಭಾರಿ ಕುಸಿತ ಕಾಣುತ್ತಿದೆ.

2020–21ನೇ ಹಣಕಾಸು ವರ್ಷಕ್ಕೆ ಮುಂಬೈ ಷೇರುಪೇಟೆಯು ನೀರಸ ಸ್ವಾಗತ ಕೋರಿದೆ. ವರ್ಷದ ಮೊದಲ ದಿನ ಮಾರಾಟದ ತೀವ್ರ ಒತ್ತಡ ಕಂಡುಬಂದಿದ್ದರಿಂದ ಹೂಡಿಕೆದಾರರು ತೀವ್ರ ನಷ್ಟಕ್ಕೆ ಗುರಿಯಾದರು. ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ. ಇದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿ ಮಾರಾಟದ ಒತ್ತಡ ಸೃಷ್ಟಿಸುತ್ತಿದೆ. ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದಿರುವ ಕುಸಿತವು ದೇಶಿ ಷೇರುಪೇಟೆಗಳ ಮೇಲೆಯೂ ಪರಿಣಾಮ ಉಂಟುಮಾಡಿತು ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಬುಧವಾರ 1,203 ಅಂಶ ಕುಸಿತ ಕಂಡು 28,265 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಮಂಗಳವಾರ 1,028 ಅಂಶ ಜಿಗಿತ ಕಂಡಿತ್ತು.

ADVERTISEMENT

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 3.20 ಲಕ್ಷ ಕೋಟಿ ಕರಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 110.28 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 343 ಅಂಶ ಇಳಿಕೆ ಕಂಡು 8,253 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.