ಮುಂಬೈ: ಕೋವಿಡ್–19 ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿರುವುದು ಮುಂಬೈ ಷೇರುಪೇಟೆಯಲ್ಲಿಯೂ ಶುಕ್ರವಾರ ಪ್ರತಿಫಲನಗೊಂಡಿತು.
ಜಾಗತಿಕ ಷೇರುಪೇಟೆಗಳಾದ ಶಾಂಘೈ, ಹಾಂಗ್ಕಾಂಗ್, ಸೋಲ್, ಟೋಕಿಯೊ ಶೇ 2ರಷ್ಟು ಕುಸಿತ ದಾಖಲಿಸಿದವು.
ಯೆಸ್ ಬ್ಯಾಂಕ್ನ ಮೇಲೆ ಆರ್ಬಿಐ ವಿಧಿಸಿರುವ ನಿರ್ಬಂಧವು ಹೂಡಿಕೆದಾರರ ಉತ್ಸಾಹವನ್ನು ಇನ್ನಷ್ಟು ಕುಗ್ಗಿಸಿತು. ಯೆಸ್ ಬ್ಯಾಂಕ್ ಪ್ರಕರಣವನ್ನು ಹೂಡಿಕೆದಾರರು ತುಂಬ ನಕಾರಾತ್ಮಕವಾಗಿ ಪರಿಗಣಿಸಿದ್ದಾರೆ. ದೇಶದ ಒಟ್ಟಾರೆ ಹಣಕಾಸು ವ್ಯವಸ್ಥೆಯ ಸ್ಥಿರತೆ ಬಗ್ಗೆಯೇ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಬಗೆಯ ಎರಡು ಪ್ರತಿಕೂಲ ವಿದ್ಯಮಾನಗಳ ಫಲವಾಗಿ ಷೇರುಪೇಟೆ ಸಂವೇದಿ ಸೂಚ್ಯಂಕವು 894 ಅಂಶಗಳಷ್ಟು ಪತನ ಕಂಡಿತು.
ದಿನದ ಆರಂಭದಲ್ಲಿಯೇ 1,459 ಅಂಶಗಳ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಸೂಚ್ಯಂಕವು ದಿನದಂತ್ಯಕ್ಕೆ ಕೆಲ ಮಟ್ಟಿಗೆ ಚೇತರಿಕೆ ಕಂಡಿತು. ಅಂತಿಮವಾಗಿ 894 ಅಂಶಗಳ ಕುಸಿತದೊಂದಿಗೆ 37,576 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಇದೇ ಬಗೆಯಲ್ಲಿ ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 279 ಅಂಶಗಳಿಗೆ ಎರವಾಗಿ 10,989 ಅಂಶಗಳಲ್ಲಿ ಕೊನೆಗೊಂಡಿತು.
ತೈಲ ಬೆಲೆ ಕುಸಿತ
ಕೋವಿಡ್ ಭೀತಿಯಿಂದಾಗಿ ಈಗಾಗಲೇ ಕುಸಿತ ಕಂಡಿರುವ ಕಚ್ಚಾ ತೈಲ ಬೆಲೆಯು ಶುಕ್ರವಾರದ ವಹಿವಾಟಿನಲ್ಲಿ ಮತ್ತೆ ಶೇ 5ರಷ್ಟು ಇಳಿಕೆ ಕಂಡಿತು. ಬ್ರೆಂಟ್ ಕಚ್ಚಾ ತೈಲ ಬೆಲೆಸಯು ಪ್ರತಿ ಡಾಲರ್ಗೆ 47.02ಕ್ಕೆ ಇಳಿದಿದೆ.
₹ 73.79 ಕುಸಿದ ರೂಪಾಯಿ ಬೆಲೆ
ಮುಂಬೈನ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿನ ರೂಪಾಯಿ ಬೆಲೆಯು 46 ಪೈಸೆಗಳಷ್ಟು ಕುಸಿತ ಕಂಡು ₹ 73.79ಕ್ಕೆ ಕುಸಿಯಿತು. ಹಣಕಾಸು ಮಾರುಕಟ್ಟೆಯ ಪರಿಸ್ಥಿತಿ ವಿಷಮಗೊಳ್ಳುತ್ತಿರುವುದರಿಂದ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.