ಮುಂಬೈ: ಕೋವಿಡ್–19 ಸಾಂಕ್ರಾಮಿಕದ ಪರಿಣಾಮದಿಂದ ಆರ್ಥಿಕತೆಯ ಮೇಲೆ ಹೊಡೆತ ಬೀಳುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಣಕಾಸು ಕಾರ್ಯಪಡೆಗೆ ಸೂಚಿಸಿದ್ದಾರೆ. ಇದರಿಂದಾಗಿ ಶುಕ್ರವಾರದವಹಿವಾಟಿನಲ್ಲಿ ಸೆನ್ಸೆಕ್ಸ್ 1,600ಅಂಶ ಏರಿಕೆ ದಾಖಲಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಹೂಡಿಕೆದಾರರಲ್ಲಿ ತಲ್ಲಣ ಮುಂದುವರಿಸಿದೆ. ಗಳಿಕೆ–ಇಳಿಕೆ ಏರಿಳಿತಗಳು ಷೇರುಪೇಟೆಗಳಲ್ಲಿ ದಾಖಲಾಗುತ್ತಿದ್ದು, ಸೆನ್ಸೆಕ್ಸ್1,600ಕ್ಕೂ ಹೆಚ್ಚು ಅಂಶ ಏರಿಕೆಯಾಗಿ30,400 ಅಂಶಗಳ ವರೆಗೂತಲುಪಿದೆ. ನಿಫ್ಟಿ426.25ಅಂಶ ಹೆಚ್ಚಳಗೊಂಡು8,689.70ಅಂಶ ಮುಟ್ಟಿದೆ.
ಹೂಡಿಕೆದಾರರು ಐಟಿಸಿ, ಪವರ್ಗ್ರಿಡ್, ಎಚ್ಯುಎಲ್, ಒಎನ್ಜಿಸಿ ಹಾಗೂ ಸನ್ ಫಾರ್ಮಾ, ಇನ್ಫೊಸಿಸ್ ಷೇರುಗಳ ಖರೀದಿಗೆ ಆಸಕ್ತಿ ವಹಿಸಿದ್ದಾರೆ. ಐಟಿ ಮತ್ತು ಇಂಧನ ವಲಯದ ಷೇರುಗಳ ಬೆಲೆ ಹೆಚ್ಚಳದೊಂದಿಗೆ ಸೂಚ್ಯಂಕ ಏರುಗತಿಯಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇ 9.95ರಷ್ಟು ಗಳಿಕೆ ಕಂಡು₹1,009 ಆಗಿದೆ. ಇನ್ಫೊಸಿಸ್ ಶೇ 9, ಟಿಸಿಎಸ್ ಶೇ 12 ಹಾಗೂ ಐಟಿಸಿ ಶೇ 6ರ ವರೆಗೂ ಏರಿಕೆಯಾಗಿದೆ.
ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹4,622.93 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಇಂಡಸ್ಇಂಡ್ ಬ್ಯಾಂಕ್ ಷೇರು ಶೇ 7ರ ವರೆಗೂ ಇಳಿಕೆ ಕಂಡಿದೆ. ಎಚ್ಡಿಎಫ್ಸಿ ಷೇರುಗಳು, ಕೊಟ್ಯಾಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್ ಹಾಗೂ ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಇಳಿಮುಖವಾಗಿವೆ.
ಭಾನುವಾರ ಜನರು ಮನೆಯಿಂದ ಹೊರಬರದೆ 'ಜನತಾ ಕರ್ಫ್ಯೂ' ಆಚರಿಸುವಂತೆ ಪ್ರಧಾನಿ ಕರೆ ನೀಡಿದ್ದಾರೆ.
ಸರ್ಕಾರದ ಮೂಲಗಳ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಚಿವರಾದ ನಿತಿನ್ ಗಡ್ಕರಿ, ಗಿರಿರಾಜ್ ಸಿಂಗ್, ಹರ್ದೀಪ್ ಸಿಂಗ್ ಪುರಿ ಹಾಗೂ ಪ್ರಹ್ಲಾದ್ ಸಿಂಗ್ ಪಟೇಲ್ ಅವರೊಂದಿಗೆ ವಿಶೇಷ ಸಭೆ ನಡೆಸಲಿದ್ದಾರೆ. ಪ್ರಸ್ತುತ ಪರಿಸ್ಥಿಯ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮಗಳ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200 ದಾಟಿದ್ದು, ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.