ADVERTISEMENT

ಬೆರಗಿನ ಬೆಳಕು: ಬ್ರಹ್ಮನಟರಾಜನ ನೃತ್ಯ

ಡಾ. ಗುರುರಾಜ ಕರಜಗಿ
Published 27 ಮಾರ್ಚ್ 2023, 19:30 IST
Last Updated 27 ಮಾರ್ಚ್ 2023, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |
ಪ್ರತ್ಯೇಕ ಜೀವದಶೆಯವನಂಗಭಂಗಿ ||
ಸತ್ಯ ಸತ್ತ÷್ವಜ್ವಾಲೆ ವಿಶ್ವಮಾಯಾಲೀಲೆ ||
ಪ್ರತ್ಯಗಾತ್ಮನು ನೀನು – ಮಂಕುತಿಮ್ಮ || 850 ||

ಪದ-ಅರ್ಥ: ಜೀವದಶೆಯವನಂಗಭಂಗಿ=ಜೀವದಶೆ(ಜೀವರೂಪ)+ಅವನ+ಅಂಗ+ಭಂಗಿ, ಪ್ರತ್ಯಗಾತ್ಮನು=ಪ್ರತ್ಯಗ್ (ವಿಸ್ತರಿಸಿದ)+ಆತ್ಮನು.

ವಾಚ್ಯಾರ್ಥ: ಈ ಜಗತ್ತು ಬ್ರಹ್ಮವೆಂಬ ನಟರಾಜನ ನೃತ್ಯ. ಪ್ರತಿಯೊಂದು ಜೀವರೂಪ ಅವನ ಅಂಗದ ಭಂಗಿ. ಅವನ
ದೇಹದಿಂದ ಹೊರಡುವ ಪ್ರಕಾಶವೇ ಸತ್ಯಸತ್ವದ ಜ್ವಾಲೆ. ಇದೇ ವಿಶ್ವದ ಮಾಯಾಲೀಲೆ. ನೀನು ಆ ಮೂಲ ಆತ್ಮದ ವಿಸ್ತರಿತ ರೂಪ.

ADVERTISEMENT

ವಿವರಣೆ: ಬ್ರಹ್ಮಸತ್ವ ನಿರಾಕಾರ, ನಿರ್ಗುಣ ಮತ್ತು ಅಚಲ. ಆ ನಿಶ್ಚಲವಾದ ಬ್ರಹ್ಮದ ಚಲನಶೀಲವಾದ ರೂಪವೇ ನಟರಾಜ. ಈ ಜಗತ್ತು ನಟರಾಜನ ವಿರಾಟ್ ನೃತ್ಯ. ಆದರೆ ಆತ ಎಲ್ಲಿದ್ದಾನೆ? ಅದನ್ನು ನಿಪುಣ ನಟ, ನಗೆಗಾರ, ಬಹುರೂಪಿ ಕಾಯಕದ ಶರಣ, ಬಹುರೂಪಿ ಚೌಡಯ್ಯ ಮನೋಜ್ಞವಾಗಿ ಹೇಳುತ್ತಾನೆ

ಎಲ್ಲಾ ಜನಂಗಳೊಳಗಿರ್ದಡೇನು ? ಶಿವನು ಜಗದಂತಹನಲ್ಲ. ಜಗವ ತನ್ನೊಳಗಿಕ್ಕಿ ತಾ ಹೊರಗಿರ್ದಹೆನೆಂದೆಡೆ ಬ್ರಹ್ಮಾಂಡದಂತಹನೇ? ಅಲ್ಲ. ಆಕಾಶದೋಪಾದಿಯಲ್ಲಿ ಸರ್ವಲೋಕದ ಒಳ ಹೊರಗೆ ಮೂಲ ಚೈತನ್ಯ ತಾನಾಗಿ, ಆಧಾರವಾದ ನಮ್ಮ ರೇಕಣ್ಣಪ್ರಿಯ ನಾಗಿನಾಥ. ಅವನು ಜಗದೊಳಗಡೆಯೂ ಇದ್ದಾನೆ, ಹೊರಗೂ ಇದ್ದಾನೆ. ಅವನು ಒಳಗೆ, ಹೊರಗೆ ಎಲ್ಲದರ ಮೂಲ ಚೈತನ್ಯವಾಗಿ, ಆಧಾರವಾಗಿದ್ದಾನೆ. ಆದರೆ ಆ ಶುದ್ಧವಾದ ಪರತತ್ವ ತಾನೇ ತಾನಾಗ ಏನನ್ನೂ ಮಾಡಲಾರದು. ಅತ್ಯಂತ ಪರಿಶುದ್ಧವಾದ ಬಂಗಾರದಿಂದ ಆಭರಣಗಳನ್ನು ಮಾಡಲಾಗದೆ ಕೆಲವು ಲೋಹಗಳನ್ನೂ ಮಿಶ್ರಮಾಡಬೇಕಾಗುತ್ತದೆ. ಅಂತೆಯೇ ಶುದ್ಧವಾದ ಪರಸತ್ವ, ಸತ್ವ, ರಜಸ್, ತಮಸ್ ಗುಣಗಳನ್ನು ಕೊಂಚ ಸೇರಿಸಿಕೊಂಡು ಕೋಟ್ಯಾಂತರ ಜೀವಿಯಾಗಿ ಹೊಮ್ಮಿದೆ. ಗೀತೆ, ಜೀವವೆಂಬುದು ಬ್ರಹ್ಮಚೈತನ್ಯದ ಒಂದಂಶವೆಂದು ಹೇಳುತ್ತದೆ.

“ಮವೈವಾಂಶೋ ಜೀವ ಲೋಕೇ ಜೀವಭೂತ: ಸನಾತನ: “ನನ್ನ ಅಂಶವೇ ಪ್ರಾಣಿ ಲೋಕದಲ್ಲಿ ಜೀವವಾಗಿರುವ ಶಾಶ್ವತ
ಸತ್ವ”. ಅದನ್ನೇ ಕಗ್ಗ ತಿಳಿಯಪಡಿಸುತ್ತದೆ. ಪ್ರತ್ಯೇಕ ಜೀವವೂ ಆ ಬ್ರಹ್ಮದ ಅನಂತ ಅಂಗಭಂಗಿಗಳಲ್ಲಿ ಒಂದು. ಹೀಗಾಗಿ ಪ್ರತಿಯೊಂದು ಜೀವ ಮೂಲಸತ್ವದ ಒಂದು ಪರಿ. ಆದ್ದರಿಂದ ಬ್ರಹ್ಮನ ತೇಜ ಜೀವಿಗಳಲ್ಲೂ ಇರಬೇಕಲ್ಲವೇ? ಇದೆ. ಅದೇ ಸತ್ಯದ ಸತ್ವಜ್ವಾಲೆ. ಅದೇ ಬ್ರಹ್ಮದ ಮಾಯೆಯ ಲೀಲೆ. ಪ್ರತಿ ಜೀವಿಯೂ ಒಬ್ಬ ಪ್ರತ್ಯಗಾತ್ಮ. ಹಾಗೆಂದರೆ ಪ್ರತ್ಯಗ್ ಆತ್ಮ, ಮೂಲ ಆತ್ಮದ ವಿಸ್ತರಿತ ರೂಪ. ಆ ಮೂಲಸತ್ವವೇ ತನ್ನ ಶಕ್ತಿಯ ಅಂಶಗಳನ್ನೂ ಜೀವಿಗಳಲ್ಲೆಲ್ಲ ಹರಡಿ, ವಿಶ್ವವೆಂಬ ಆಟಿಕೆಯನ್ನು ಸೃಷ್ಟಿಮಾಡಿ ಆಟವಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.