ADVERTISEMENT

ದಶಮಂಟಪಗಳ ಶೋಭಾಯಾತ್ರೆ

ಸಾಂಪ್ರದಾಯಿಕ ಆಚರಣೆ; ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:03 IST
Last Updated 19 ಅಕ್ಟೋಬರ್ 2018, 19:03 IST
ಮಡಿಕೇರಿಯ ಕೋಟೆ ಮಾರಿಯಮ್ಮ ದೇವಸ್ಥಾನದ ಆಕರ್ಷಕ ಮಂಟಪ
ಮಡಿಕೇರಿಯ ಕೋಟೆ ಮಾರಿಯಮ್ಮ ದೇವಸ್ಥಾನದ ಆಕರ್ಷಕ ಮಂಟಪ   

ಮಡಿಕೇರಿ: ದಸರಾ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ದಶಮಂಟಪಗಳ ಶೋಭಾಯಾತ್ರೆಗೆ ವಿವಿಧೆಡೆಯಿಂದ ಬಂದಿದ್ದ ಪ್ರವಾಸಿಗರು ಸಾಕ್ಷಿಯಾದರು. ವಿದ್ಯುತ್‌ ಬೆಳಕಿನಲ್ಲಿ ಮಂಟಪಗಳು ಕಂಗೊಳಿಸಿದವು. ಪೌರಾಣಿಕ ಕಥಾ ಸಾರಾಂಶವುಳ್ಳ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು.

ಶ್ರೀಪೇಟೆ ರಾಮ ಮಂದಿರ, ದೇಚೂರು ರಾಮ ಮಂದಿರ, ದಂಡಿನ ಮಾರಿಯಮ್ಮ, ಚೌಡೇಶ್ವರಿ, ಕೋಟೆ ಮಾರಿಯಮ್ಮ, ಕೋದಂಡ ರಾಮಮಂದಿರ, ಕರವಲೆಭಗವತಿ, ಕೋಟೆ ಗಣಪತಿ, ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಮಂಟಪಗಳ ಕಲಾಕೃತಿಗಳು ವಿದ್ಯುತ್‌ ಬೆಳಕಿನ ನಡುವೆ ಆಕರ್ಷಿಸಿದವು.

‘ಗಣಪತಿ ಮತ್ತು ಪರಶುರಾಮ ಕಾಳಗ’, ‘ಶಿವ ಪುರಾಣ...’, ‘ನಂದಿಯಿಂದ ಶಿವನ ದರ್ಶನ...’, ‘ಪಂಚಮುಖಿ ಆಂಜನೇಯ ದರ್ಶನ...’ ಸೇರಿದಂತೆ ಹಲವು ಪೌರಾಣಿಕ ಕಥೆಗಳನ್ನು ಪ್ರಸ್ತುತಪಡಿಸಲಾಯಿತು.

ADVERTISEMENT

ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಮಡಿಕೇರಿಯಲ್ಲಿ ಈ ಬಾರಿ ದಸರಾವನ್ನು ಸರಳವಾಗಿ ಆಚರಿಸಲಾಯಿತು. ಶೋಭಾಯಾತ್ರೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಮೈಸೂರಿನಲ್ಲಿ ಜಂಬೂ ಸವಾರಿ ಮುಕ್ತಾಯವಾದ ಕೂಡಲೇ ಮಡಿಕೇರಿಯಲ್ಲಿ ಶೋಭಾಯಾತ್ರೆ ರಂಗು ಪಡೆದುಕೊಳ್ಳುತ್ತಿತ್ತು. ಆದರೆ, ಈ ಬಾರಿ ವೈಭವ ಕಳೆದುಕೊಂಡಿತ್ತು.

‘ನಾಡಹಬ್ಬ ಕೈಬಿಡಬಾರದೆಂದು ಸಾಂಪ್ರದಾಯಿಕವಾಗಿ ನಡೆಸಲಾಯಿತು’ ಎಂದು ಶ್ರೀಪೇಟೆ ರಾಮಮಂದಿರದ ಪದಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.