ADVERTISEMENT

ಶಿರಸಿಯಲ್ಲಿ ವೈಭವದ ಜಂಬೂ ಸವಾರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 12:22 IST
Last Updated 19 ಅಕ್ಟೋಬರ್ 2018, 12:22 IST
ಶಿರಸಿಯ ಸ್ವಾದಿ ದಿಗಂಬರ ಜೈನ ಮಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಜಂಬೂ ಸವಾರಿಗೆ ಚಾಲನೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು. ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಚಿತ್ರದಲ್ಲಿದ್ದಾರೆ.
ಶಿರಸಿಯ ಸ್ವಾದಿ ದಿಗಂಬರ ಜೈನ ಮಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಜಂಬೂ ಸವಾರಿಗೆ ಚಾಲನೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು. ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಚಿತ್ರದಲ್ಲಿದ್ದಾರೆ.   

ಶಿರಸಿ:ಜೈನರ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಸ್ವಾದಿ ದಿಗಂಬರ ಜೈನ ಮಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿಶುಕ್ರವಾರಜಂಬೂ ಸವಾರಿ ನೆರವೇರಿಸಲಾಯಿತು. ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಹಾಗೂ ವಿವಿಧ ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಮಠದಲ್ಲಿ ನವರಾತ್ರಿಯ ವಿವಿಧ ಧಾರ್ಮಿಕ ಪೂಜಾ ವಿಧಿ–ವಿಧಾನಗಳನ್ನು ನೆರವೇರಿಸಿದ ಸ್ವಾಮೀಜಿ, ಪಂಚಾಮೃತಾಭಿಷೇಕ ಪೂರ್ಣಗೊಳಿಸಿದರು. ನಂತರ ಆಚಾರ್ಯ ಅಕಲಂಕರ ಭಾವಚಿತ್ರ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸಿ ಅಂಬಾರಿ ಹೊತ್ತ ಆನೆಗೆ ಪೂಜೆ ನೆರವೇರಿಸಿದರು. ಎರಡು ಬಿಳಿ ಕುದುರೆಗಳಸಾರಥ್ಯದಲ್ಲಿ ಜಂಬೂ ಸವಾರಿ ನಡೆಯಿತು.

ಪೂರ್ಣ ಕುಂಭ ಹೊತ್ತ ಮಹಿಳೆಯರು,ಡೊಳ್ಳು, ತಮಟೆ, ಶಹನಾಯಿ ವಾದನಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿದ್ದವು. ನಿಶಿಧಿ ಬಳಿ ಇರುವ 21 ಪೂರ್ವಾಚಾರ್ಯರ ಪಾದುಕೆಗಳಿಗೆ ಸ್ವಾಮೀಜಿ ಪಂಚಾಮೃತ ಅಭಿಷೇಕ ಮಾಡಿದರು. ಶಮಿ ಪೂಜೆಯ ನಂತರ ಬನ್ನಿ ವಿತರಣೆ ನೆರವೇರಿಸಿದರು.

ADVERTISEMENT

ಮಠದಲ್ಲಿ ವಿಶೇಷ ಪಂಚಾಮೃತ ಅಭಿಷೇಕದ ನಂತರ ಪೂರ್ವಾಚಾರ್ಯರ ಪೂಜೆ, ಅಕಲಂಕರ ಪೂಜೆ ನಡೆಯಿತು. ಪರಂಪರಾಗತ ಸದ್ಧರ್ಮ ಸಿಂಹಾಸನ ಪೀಠಾರೋಹಣ ಮತ್ತು ಧರ್ಮೋಪದೇಶ ಕಾರ್ಯವನ್ನೂ ಮಾಡಲಾಯಿತು. ನಂತರ ಮಠದಲ್ಲಿ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮದಲ್ಲಿಭಕ್ತರಿಗೆಫಲ ಮಂತ್ರಾಕ್ಷತೆ ವಿತರಿಸಲಾಯಿತು.

ರಾಜ ವಂಶಸ್ಥರ ಆಡಳಿತವಿದ್ದಾಗ ಈ ಮಠದಲ್ಲಿ ಶರನ್ನವರಾತ್ರಿಯ ವಿಜಯ ದಶಮಿಯಂದು ಮಠದ ಆಶ್ರಯದಲ್ಲಿದ್ದ ಐದು ಆನೆಗಳಿಗೆ ಅಲಂಕಾರ ಮಾಡಿ ಅಂಬಾರಿ ಮೆರವಣಿಗೆ ನಡೆಸಲಾಗುತ್ತಿತ್ತು. ಕಾಲ ಕ್ರಮೇಣಈ ಪದ್ಧತಿ ನಿಂತು, ಒಂದೂವರೆ ಶತಮಾನ ವಿಜಯ ದಶಮಿಯಂದು ಆನೆ ಅಂಬಾರಿ ಉತ್ಸವ ಮೆರವಣಿಗೆ ಇಲ್ಲದೆ ಕಳೆದು ಹೋಗಿತ್ತು. ಮಠದ ಪೀಠಾಧಿಪತಿ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹಿಂದಿನ ಸಂಪ್ರದಾಯವನ್ನು ಮತ್ತೆ ಜಾರಿ ಮಾಡಿದ್ದರು. ಅದರಂಗವಾಗಿ ನಡೆದ ಉತ್ಸವದ ಮೆರವಣಿಯಲ್ಲಿ ಜಂಬೂ ಸವಾರಿ ವಿಶೇಷವಾಗಿ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.