ADVERTISEMENT

ದಿನದ ಸೂಕ್ತಿ: ಸಜ್ಜನರ ಸಹವಾಸ

ಎಸ್.ಸೂರ್ಯಪ್ರಕಾಶ ಪಂಡಿತ್
Published 22 ಸೆಪ್ಟೆಂಬರ್ 2020, 3:36 IST
Last Updated 22 ಸೆಪ್ಟೆಂಬರ್ 2020, 3:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೂರೀಕರೋತಿ ಕುಮತಿಂ ವಿಮಲೀಕರೋತಿ

ಚೇತಶ್ಚಿರಂತನಮಘಂ ಚುಲುಕೀಕರೋತಿ ।

ಭೂತೇಷು ಕಿಂ ಚ ಕರುಣಾಂ ಬಹುಲೀಕರೋತಿ

ADVERTISEMENT

ಸಂಗಃ ಸತಾಂ ಕಿಮು ನ ಮಂಗಲಮಾತನೋತಿ ।।

ಇದರ ತಾತ್ಪರ್ಯ ಹೀಗೆ:

‘ಸಜ್ಜನರ ಸಹವಾಸವು ಬುದ್ಧಿಯ ಕೊಳೆಯನ್ನು ಹೋಗಲಾಡಿಸುತ್ತದೆ. ಚಿತ್ತವನ್ನು ಪರಿಶುದ್ಧಗೊಳಿಸುತ್ತದೆ; ದೀರ್ಘಕಾಲದ ಪಾಪಸಂಚಯವನ್ನು ನಾಶಗೊಳಿಸುತ್ತದೆ; ಜೀವಿಗಳ ವಿಷಯದಲ್ಲಿ ಕರುಣೆಯ ಭಾವವನ್ನು ಹೆಚ್ಚಿಸುತ್ತದೆ. ಇಷ್ಟೊಂದು ವಿಧದಲ್ಲಿ ನಮ್ಮ ಜೀವನವನ್ನು ಪ್ರಭಾವಿಸುವ ಸತ್ಸಂಗ ಯಾವ ಒಳಿತನ್ನು ತಾನೆ ಮಾಡದಿದ್ದೀತು?’

ದಿನದ ಸೂಕ್ತಿ ಕೇಳಿ:ಸಜ್ಜನರ ಸಹವಾಸ

ಸಜ್ಜನರ ಸಹವಾಸದ ಹಿರಿಮೆಯನ್ನು ಈ ಸುಭಾಷಿತ ಕಟ್ಟಿಕೊಡುತ್ತಿದೆ.

ನಮ್ಮ ಬುದ್ಧಿಯೇ ನಮಗೆ ಆಗಾಗ ಕೈ ಕೊಡುತ್ತಿರುತ್ತದೆ. ಆಗ ನಮ್ಮ ಕೈ ಹಿಡಿಯಬೇಕಾದವರು ಯಾರು? ನಮ್ಮ ಆಪ್ತರೇ ಅಂಥ ಸಮಯದಲ್ಲಿ ನಮಗೆ ಮಾರ್ಗದರ್ಶಕರಾಗಬೇಕು. ಹೀಗೆ ನಮ್ಮನ್ನು ಕಷ್ಟಕಾಲದಲ್ಲಿ ಕೈ ಹಿಡಿದು, ನಮ್ಮ ಬುದ್ಧಿಯೂ ಹೃದಯವೂ ಆಗಬಲ್ಲವರೇ ಸಜ್ಜನರು.

ಸಜ್ಜನರು ನಮ್ಮನ್ನು ಎಷ್ಟೆಲ್ಲ ವಿಧದಲ್ಲಿ ಕಾಪಾಡುತ್ತಾರೆ ಎನ್ನುವುದನ್ನು ಸುಭಾಷಿತ ನಿರೂಪಿಸಿದೆ.

ಮೊದಲನೆಯದಾಗಿ ಸಜ್ಜನರ ಸಹವಾಸ ನಮ್ಮ ಬುದ್ಧಿಯ ಕೊಳೆಯನ್ನು ನಾಶಮಾಡುತ್ತದೆ. ಬುದ್ಧಿಯ ಕೊಳೆ ಎಂದರೆ ವಿಷಯವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದಿರುವುದು, ಯಥಾರ್ಥ ಜ್ಞಾನದಿಂದ ವಂಚಿತರಾಗಿರುವುದು ಎಂದು ಅರ್ಥ. ಹೇಗೆ ಕನ್ನಡಿಗೆ ಕೊಳೆ ಅಂಟಿದ್ದಾಗ ನಮ್ಮ ಪ್ರತಿಬಿಂಬ ಅದರಲ್ಲಿ ಸರಿಯಾಗಿ ಪ್ರತಿಫಲನವಾಗುವುದಿಲ್ಲವೊ ಹಾಗೆಯೇ ನಮ್ಮ ಬುದ್ಧಿ ಕೊಳೆಯಾಗಿದ್ದಾಗ ಪರಿಸ್ಥಿತಿಯ ಸರಿಯಾದ ತಿಳಿವಳಿಕೆ ಮಸಕಾಗಿರುತ್ತದೆ. ಇಂಥ ಸಮಯದಲ್ಲಿ ನಮ್ಮ ಬುದ್ಧಿಯ ಕೊಳೆಯನ್ನು ತೊಳೆಯಬಲ್ಲವರೇ ಸಜ್ಜನರು.

ಸಜ್ಜನರು ಮಾಡುವ ಎರಡನೆಯ ಉಪಕಾರ ಎಂದರೆ ನಮ್ಮ ಚಿತ್ತವನ್ನು ಪರಿಶುದ್ಧಗೊಳಿಸುವುದು. ಬುದ್ಧಿ ಮಾತ್ರವೇ ಸ್ಪಷ್ಟವಾಗಿದ್ದರೆ ಪ್ರಯೋಜವಿಲ್ಲ, ನಮ್ಮ ಚಿತ್ತವೂ ಪರಿಶುದ್ಧವಾಗಿರಬೇಕು. ಚಿತ್ತ ಎಂದರೆ ಮನಸ್ಸೂ ಆಗಬಹುದು, ಮನಸ್ಸಿನ ಬುದ್ಧಿಯೂ ಆಗಬಹುದು. ಇವು ಎಂದಿಗೂ ಸ್ಪಷ್ಟವಾಗಿರುವುದರಲ್ಲಿಯೇ ನಮ್ಮ ಜೀವನದ ಸ್ವಾಸ್ಥ್ಯ ಅಡಗಿದೆ. ಇಂಥ ಆರೋಗ್ಯವನ್ನು ಕಾಪಾಡಬಲ್ಲವರೇ ಸಜ್ಜನರು.

ನಮ್ಮ ಪಾಪಗಳನ್ನು ನಾಶಮಾಡುವುದು ಸಜ್ಜನರು ನಮಗೆ ಮಾಡುವ ಮೂರನೆಯ ಉಪಕಾರ. ಮಾಡಬಾರದ ಕೆಲಸವನ್ನು ಮಾಡಿದಾಗ ನಮಗೆ ಪಾಪ ಅಂಟಿಕೊಳ್ಳುತ್ತದೆ. ಹೀಗೆ ನಾವು ಕೆಟ್ಟ ಕೆಲಸಗಳನ್ನು ಮಾಡದಂತೆ ನಮ್ಮನ್ನು ತಡೆದು, ನಮ್ಮನ್ನು ಒಳ್ಳೆಯ ಕೆಲಸಗಳ ಕಡೆಗೆ ತಿರುಗಿಸಬಲ್ಲವರೇ ಸಜ್ಜನರು.

ನಮಗೆ ನಮ್ಮ ಸಮಾಜದ ಬಗ್ಗೆ, ಸಹಜೀವಿಗಳ ಬಗ್ಗೆ ಸಹಾನುಭೂತಿ ಇರಬೇಕು. ಆದರೆ ಈ ಗುಣ ಆಗಾಗ ನಮ್ಮಿಂದ ದೂರವಾಗುವ ಸಂಭವೇ ಹೆಚ್ಚಾಗಿರುತ್ತದೆ. ಇಂಥ ಸಮಯದಲ್ಲಿ ನಮ್ಮ ಮನಸ್ಸಿನ ವೈಶಾಲ್ಯಕ್ಕೆ ಕಾರಣರಾಗಬಲ್ಲವರೇ ಸಜ್ಜನರು. ಇನ್ನೊಬ್ಬರ ಬಗ್ಗೆ ಕರುಣೆಯಿಂದ ನಡೆದುಕೊಳ್ಳುವಂಥ ಮಾನಸಿಕತೆಯನ್ನು ಅವರು ನಮ್ಮಲ್ಲಿ ತುಂಬಬಲ್ಲವರಾಗಿರುತ್ತಾರೆ.

ದುಷ್ಟರ ಸಹವಾಸದಿಂದ ಹಲವರು ತಮ್ಮ ಜೀವನವನ್ನು ನಾಶಮಾಡಿಕೊಳ್ಳುತ್ತಿರುವಂಥ ಉದಾಹರಣೆಗಳು ನಮ್ಮ ಮುಂದೆ ನಿತ್ಯವೂ ಎದುರಾಗುತ್ತಿರುತ್ತವೆ. ನಮ್ಮ ಸ್ನೇಹಿತರನ್ನು ಆಯ್ಕೆಮಾಡಿಕೊಳ್ಳಬೇಕಾದಾಗ ನಾವು ತುಂಬ ಎಚ್ಚರದಿಂದ ಇರಬೇಕು. ನಮ್ಮ ವ್ಯಕ್ತಿತ್ವಕ್ಕೆ ಘನತೆಯನ್ನೂ, ನಮ್ಮ ಜೀವನಕ್ಕೆ ಅರ್ಥವನ್ನೂ ಒದಗಿಸುವ ಸಜ್ಜನರನ್ನೇ ನಮ್ಮ ಸ್ನೇಹವಲಯಕ್ಕೆ ಸೇರಿಸಿಕೊಳ್ಳುವ ವಿವೇಕ ನಮ್ಮ ಸಹಜ ಸ್ವಭಾವವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.